ಶಕುನಿ ಮುರಿದನು ಬೇಹ ದಳನಾ
ಯಕರು ತಿರುಗಿತು ಭೀಮಸೇನನ
ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ
ಅಕಟಕಟ ಕುರುಸೇನೆ ನಿರ್ನಾ
ಯಕವಲಾ ಹಾ ಎನುತ ಮಂತ್ರಿ
ಪ್ರಕರ ಮರುಗಿತು ತುರುಗಿತಲ್ಲಿಯದಲ್ಲಿ ಕಳವಳಿಸಿ (ಕರ್ಣ ಪರ್ವ, ೧೮ ಸಂಧಿ, ೩೦ ಪದ್ಯ)
ತಾತ್ಪರ್ಯ:
ಶಕುನಿಯು ಸೋತು ಹಿಮ್ಮೆಟ್ಟಿದನು. ಕೌರವನ ಆಪ್ತ ನಾಯಕರು ಬೆನ್ನು ತೋರಿಸಿದರು. ಭೀಮನ ಸಿಂಹಗರ್ಜನೆಗೆ ಕುರುವೀರರ ಹೃದಯಗಳು ಕಳವಳಿಸಿದವು. ಮಂತ್ರಿಗಳು ಅಲ್ಲಲ್ಲಿ ಸೇರಿ, ಅಯ್ಯೋ ಕುರುಸೇನೆಗೆ ನಾಯಕರೇ ಇಲ್ಲವಲ್ಲಾ ಎನ್ನುತ್ತಾ ಭಯಗೊಂಡು ಅಲ್ಲಲ್ಲಿ ಗುಜುಗುಟ್ಟಿದರು.
ಅರ್ಥ:
ಮುರಿ: ಸೀಳು; ಬೇಹ: ಬೇಕಾದ; ದಳ: ಸೈನ್ಯ; ನಾಯಕ: ಒಡೆಯ; ತಿರುಗು: ಬೆನ್ನುತೋರು, ಹಿಂದಿರುಗು; ವಿಕಟ: ಭೀಕರವಾದ, ಭಯಾನಕವಾದ; ಸಿಂಹ: ಕೇಸರಿ; ಧ್ವನಿ: ಶಬ್ದ; ಜರಿ: ಅಳುಕು, ಹಿಂಜರಿ; ಭಟ: ಸೈನಿಕ; ಬಲು: ದೊಡ್ಡ; ಹೃದಯ: ಎದೆ, ವಕ್ಷಸ್ಥಳ; ಅಕಟಕಟ: ಅಯ್ಯೋ; ನಿರ್ನಾಯಕ: ನಾಯಕವಿಲ್ಲದ; ಮಂತ್ರಿ: ಸಚಿವ; ಪ್ರಕರ: ಗುಂಪು; ಮರುಗು: ದುಃಖಿಸು; ತುರುಗು: ಸಂದಣಿ, ದಟ್ಟಣೆ; ಕಳವಳ: ಗೊಂದಲ, ಚಿಂತೆ;
ಪದವಿಂಗಡಣೆ:
ಶಕುನಿ +ಮುರಿದನು +ಬೇಹ +ದಳ+ನಾ
ಯಕರು +ತಿರುಗಿತು+ ಭೀಮಸೇನನ
ವಿಕಟ +ಸಿಂಹಧ್ವನಿಗೆ +ಜರಿದುದು +ಭಟರ +ಬಲು+ಹೃದಯ
ಅಕಟಕಟ +ಕುರುಸೇನೆ +ನಿರ್ನಾ
ಯಕವಲಾ+ ಹಾ +ಎನುತ +ಮಂತ್ರಿ
ಪ್ರಕರ+ ಮರುಗಿತು +ತುರುಗಿತ್+ಅಲ್ಲಿಯದಲ್ಲಿ +ಕಳವಳಿಸಿ
ಅಚ್ಚರಿ:
(೧) ಭೀಮನ ಶಕ್ತಿಯ ವರ್ಣನೆ – ಭೀಮಸೇನನ ವಿಕಟ ಸಿಂಹಧ್ವನಿಗೆ ಜರಿದುದು ಭಟರ ಬಲುಹೃದಯ