ಇನಿಬರೊಂದೇ ಸೂಠಿಯಲಿ ಮುಂ
ಮೊನೆಯ ಬೋಳೆಯ ಸುರಿದರಡಿಗಡಿ
ಗಿನಿಬರಂಬನು ಮುರಿದು ತರಿದನು ಸೂತ ವಾಜಿಗಳ
ತನತನಗೆ ಹೊಸ ರಥದೊಳೊಂದೊ
ಗ್ಗಿನಲಿ ಕವಿದೆಚ್ಚರು ಮಹಾಹವ
ವೆನಗೆ ಬಣ್ಣಿಸಲರಿದು ಧರಣೀಪಾಲ ಕೇಳೆಂದ (ಕರ್ಣ ಪರ್ವ, ೧೩ ಸಂಧಿ, ೩೮ ಪದ್ಯ)
ತಾತ್ಪರ್ಯ:
ಸಂಜಯನು ಯುದ್ಧವನ್ನು ವಿವರಿಸುತ್ತಾ, ರಾಜ ಇವರೆಲ್ಲರೂ ಒಂದೇ ಬಾರಿ ಒಂದೇ ವೇಗದಿಂದ ಬೋಳೆಯೆಂಬ ಬಾಣವನ್ನು ಕರ್ಣನ ಮೇಲೆ ಬಿಟ್ಟರು. ಕರ್ಣನು ಇವರೆಲ್ಲರ ಬಾಣಗಳನ್ನು ಕಡಿದು ಅವರ ಸಾರಥಿಯರನ್ನು ಕುದುರೆಗಳನ್ನು ಕೊಂದನು. ಅವರೆಲ್ಲರೂ ಮತ್ತೆ ಹೊಸ ರಥಗಳನ್ನೇರಿ ಒಟ್ಟಾಗಿ ಕರ್ಣನನ್ನು ಮುತ್ತಿದರು. ರಾಜನೇ ಇವರ ಆ ಮಹಾಯುದ್ಧವನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ ಎಂದು ಸಂಜಯನು ಹೇಳಿದನು.
ಅರ್ಥ:
ಇನಿಬರು: ಇಷ್ಟು ಜನ; ಸೂಠಿ: ವೇಗ; ಮೊನೆ: ಹರಿತವಾದ, ತೀಕ್ಷ್ಣವಾದ; ಬೋಳೆ:ಒಂದು ಬಗೆಯ ಹರಿತವಾದ ಬಾಣ; ಸುರಿ: ಮೇಲಿನಿಂದ ಬೀಳು, ವರ್ಷಿಸು; ಅಡಿಗಡಿ: ಮತ್ತೆ ಮತ್ತೆ; ಅಂಬು: ಬಾಣ; ಮುರಿ: ಸೀಳು; ತರಿ:ಕಡಿ, ಕತ್ತರಿಸು; ಸೂತ: ರಥವನ್ನು ಓಡಿಸುವ; ವಾಜಿ: ಕುದುರೆ; ತನತನಗೆ:ಅವರವರೇ; ಹೊಸ: ನವೀನ; ರಥ: ಬಂಡಿ, ತೇರು; ಒಗ್ಗು: ಗುಂಪು, ಸಮೂಹ; ಕವಿ: ಆವರಿಸು; ಎಚ್ಚು: ಬಾಣಬಿಡು; ಆಹವ: ಯುದ್ಧ; ಬಣ್ಣಿಸು: ವರ್ಣಿಸು; ಅರಿ: ತಿಳಿ; ಧರಣೀಪಾಲ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಇನಿಬರ್+ಒಂದೇ +ಸೂಠಿಯಲಿ +ಮುಂ
ಮೊನೆಯ+ ಬೋಳೆಯ +ಸುರಿದರ್+ಅಡಿಗಡಿಗ್
ಇನಿಬರ್+ಅಂಬನು +ಮುರಿದು +ತರಿದನು +ಸೂತ +ವಾಜಿಗಳ
ತನತನಗೆ+ ಹೊಸ +ರಥದೊಳ್+ಒಂದ್+
ಒಗ್ಗಿನಲಿ +ಕವಿದೆಚ್ಚರು +ಮಹ+ಆಹವವ್
ಎನಗೆ +ಬಣ್ಣಿಸಲ್+ಅರಿದು +ಧರಣೀಪಾಲ+ ಕೇಳೆಂದ
ಅಚ್ಚರಿ:
(೧) ಬಾಣದ ಹೆಸರು – ಬೋಳೆ
(೨) ಅಡಿಗಡಿಗೆ, ತನತನಗೆ – ಪದದ ಬಳಕೆ