ಕಾಲಯಮನೋ ಕರ್ಣನೋ ಭೂ
ಪಾಲಕನ ಬೆಂಬತ್ತಿದನು ಪಾಂ
ಚಾಲೆಯೋಲೆಯ ಕಾವರಿಲ್ಲಾ ಎನುತ ಬಲನೊದರೆ
ಕೇಳಿದನು ಕಳವಳವನೀ ರಿಪು
ಜಾಲವನು ಜರೆದಡ್ಡಹಾಯ್ದನು
ಗಾಳಿಗುದಿಸಿದ ವೀರನದ್ಭುತ ಸಿಂಹನಾದದಲಿ (ಕರ್ಣ ಪರ್ವ, ೧೩ ಸಂಧಿ, ೨೩ ಪದ್ಯ)
ತಾತ್ಪರ್ಯ:
ಕರ್ಣನು ಬರುವ ಬಗೆಯನ್ನು ಕಂಡ ಪಾಂಡವರ ಸೈನ್ಯವು ಇವನು ಕರ್ಣನೋ, ಪ್ರಳಯಕಾಲದ ಯಮನೋ? ಧರ್ಮಜನನ್ನು ಬೆನ್ನು ಹತ್ತಿದ್ದಾನೆ. ಅರಸನನ್ನು ಕಾಪಾದುವವರೇ ಇಲ್ಲ ಎಂದು ಹೆದರಿಕೂಗಿಕೂಳ್ಳಲು ಭೀಮನು ಈ ಸದ್ದನ್ನು ಕೇಳಿ ಶತ್ರುಗಳನ್ನು ಜರೆದು ಅದ್ಭುತವಾದ ಸಿಂಹನಾದವನ್ನು ಮಾಡುತ್ತಾ ಕರ್ಣನನ್ನು ಅಡ್ಡಗಟ್ಟಿದನು.
ಅರ್ಥ:
ಕಾಲ: ಪ್ರಳಯಕಾಲ, ಅಂತ್ಯದ ಸಮಯ; ಯಮ: ಮೃತ್ಯುದೇವತೆ; ಭೂಪಾಲಕ: ರಾಜ, ನೃಪ; ಬೆಂಬತ್ತಿ: ಹಿಂದೆ; ಪಾಂಚಾಲೆ: ದ್ರೌಪದಿ; ಓಲೆ: ಕಿವಿಯ ಆಭರಣ; ಕಾವ: ರಕ್ಷಿಸುವ; ಬಲ: ಸೈನ್ಯ; ಒದರು: ಹೇಳು, ಅರಚು; ಕೇಳು: ಆಲಿಸು; ಕಳವಳ: ಆತಂಕ; ರಿಪು: ವೈರಿ; ಜಾಲ:ಬಲೆ; ಜರೆ: ಬಯ್ಯು, ಹೀಯಾಳಿಸು; ಅಡ್ಡಹಾಕು: ತಡೆ; ಹಾಯ್ದು: ಬಂದು; ಗಾಳಿ: ವಾಯು; ಉದಿಸು: ಹುಟ್ಟು; ವೀರ: ಶೂರ, ಪರಾಕ್ರಮಿ; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ;
ಪದವಿಂಗಡಣೆ:
ಕಾಲಯಮನೋ +ಕರ್ಣನೋ +ಭೂ
ಪಾಲಕನ+ ಬೆಂಬತ್ತಿದನು +ಪಾಂ
ಚಾಲೆ+ಓಲೆಯ +ಕಾವರಿಲ್ಲಾ+ ಎನುತ+ ಬಲನ್+ಒದರೆ
ಕೇಳಿದನು +ಕಳವಳವನ್+ಈ+ ರಿಪು
ಜಾಲವನು+ ಜರೆದ್+ಅಡ್ಡ+ಹಾಯ್ದನು
ಗಾಳಿಗ್+ಉದಿಸಿದ +ವೀರನ್+ಅದ್ಭುತ +ಸಿಂಹನಾದದಲಿ
ಅಚ್ಚರಿ:
(೧) ಭೀಮನನ್ನು ಗಾಳಿಗುದಿಸಿದ ಎಂದು ಕರೆದಿರುವುದು
(೨) ಧರ್ಮರಾಯನಿಗೆ ರಕ್ಷಣೆಕೊಡುವವರಿಲ್ಲ ಎಂದು ಹೇಳಲು – ಪಾಂಚಾಲೆಯೋಲೆಯ ಕಾವರಿಲ್ಲಾ ಎಂದು ಕರೆದಿರುವುದು