ಪದ್ಯ ೫೯: ಧರ್ಮರಾಯನಿಗೆ ಕರ್ಣನು ಯಾವ ಸಲಹೆಯನ್ನು ನೀಡಿದನು?

ಶ್ರುತಿರಹಸ್ಯವನರಿವ ಧರ್ಮ
ಸ್ಥಿತಿಗತಿಯನಾರೈವ ಶಾಸ್ತ್ರ
ಪ್ರತತಿಯರ್ಥವಿಚಾರವಾಚರಣಾದಿ ಕರ್ಮದಲಿ
ಚತುರರಹ ದರುಶನದ ತರ್ಕದ
ಮತನಿಧಾನವನರಿವ ವರ ಪಂ
ಡಿತರು ನಿಮಗೀ ಕದನಕರ್ಕಶವಿದ್ಯೆಯೇಕೆಂದ (ಕರ್ಣ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ವೇದದ ರಹಸ್ಯವನ್ನು ತಿಳಿದುಕೊಳ್ಳುವ ಧರ್ಮವಾವುದು? ಹೇಗೆ ವೇದವನ್ನು ಪಾಲಿಸಬೇಕು ಎನ್ನುವುದು ಹುಡುಕುವ ಶಾಸ್ತ್ರಗಳ ಅರ್ಥವಿಚಾರ ಆಚರಣೆ ಕರ್ಮಗಳಲ್ಲಿ ಚಾತುರ್ಯವನ್ನು ಸಂಪಾದಿಸುವ ತರ್ಕ ಎಲ್ಲಿಗೆ ಒಯ್ದು ಬಿಡುತ್ತದೆ ಎನ್ನುವುದನ್ನು ಹುಡುಕುವ ಪಂಡಿತರು ನೀವು. ನಿಮಗೆ ಕರ್ಕಶವಾನ್ದ ಯುದ್ಧದ ಗೋಡವೆಯೇಕೆ ಎಂದು ಕರ್ಣನು ಧರ್ಮರಾಯನಿಗೆ ತಿಳಿಸಿದನು.

ಅರ್ಥ:
ಶ್ರುತಿ: ವೇದ; ರಹಸ್ಯ: ಗುಟ್ಟು, ಗೋಪ್ಯ; ಅರಿ: ತಿಳಿ; ಧರ್ಮ: ಧಾರಣೆ ಮಾಡಿದ; ಸ್ಥಿತಿ: ಇರವು, ಅಸ್ತಿತ್ವ; ಗತಿ: ಇರುವ ಸ್ಥಿತಿ, ಅವಸ್ಥೆ, ಗಮನ; ಶಾಸ್ತ್ರ: ವಿಧಿ, ನಿಯಮ; ಪ್ರತತಿ: ಗುಂಪು, ಸಮೂಹ; ವಿಚಾರ: ಪರ್ಯಾಲೋಚನೆ, ವಿಮರ್ಶೆ; ಅರ್ಥ: ಪುರುಷಾರ್ಥ; ಆಚರಣೆ: ಅನುಸರಿಸುವುದು; ಕರ್ಮ: ಕೆಲಸ; ಚತುರ: ಜಾಣ; ದರುಶನ: ಅವಲೋಕನ, ತತ್ತ್ವಜ್ಞಾನ; ತರ್ಕ: ಊಹೆ, ಅನುಮಾನ; ಮತ: ಅಭಿಪ್ರಾಯ; ನಿಧಾನ: ವಿಳಂಬ; ವರ: ಶ್ರೇಷ್ಠ; ಪಂಡಿತ: ವಿಧಾಂಸ; ಕದನ: ಯುದ್ಧ; ಕರ್ಕಶ: ಜೋರಾದ ಶಬ್ದ, ಅಬ್ಬರ; ವಿದ್ಯೆ: ಜ್ಞಾನ;

ಪದವಿಂಗಡಣೆ:
ಶ್ರುತಿ+ರಹಸ್ಯವನ್+ಅರಿವ +ಧರ್ಮ
ಸ್ಥಿತಿಗತಿಯನ್+ಆರೈವ +ಶಾಸ್ತ್ರ
ಪ್ರತತಿ+ ಅರ್ಥ+ವಿಚಾರ+ವಾಚರಣಾದಿ+ ಕರ್ಮದಲಿ
ಚತುರರಹ +ದರುಶನದ +ತರ್ಕದ
ಮತ+ನಿಧಾನವನ್+ಅರಿವ +ವರ +ಪಂ
ಡಿತರು +ನಿಮಗೀ +ಕದನ+ಕರ್ಕಶ+ವಿದ್ಯೆ+ಏಕೆಂದ

ಅಚ್ಚರಿ:
(೧) ಶ್ರುತಿ, ಸ್ಥಿತಿ, ಪ್ರತತಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ