ಪದ್ಯ ೪: ಏನು ಹೇಳಿ ಶಲ್ಯನು ಸಾರಥಿಯಾಗಲೊಪ್ಪಿದನು?

ಈ ದುರಾಗ್ರಹ ನಿನ್ನ ಚಿತ್ತದೊ
ಳಾದುದೇ ತಪ್ಪೇನು ಕೋಗಿಲೆ
ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
ಕಾದಿ ಗೆಲುವುದು ಬಾರಿ ಗುರು ಭೀ
ಷ್ಮಾದಿ ಭಟರೇನಾದರೈ ತಾ
ನಾದುದಾಗಲಿ ನಾವು ಸಾರಥಿಯಾದೆವೇಳೆಂದ (ಕರ್ಣ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನ ನಿನಗೇಕೆ ಈ ಮೊಂಡುತನ? ಇದರಲ್ಲಿ ತಪ್ಪೇನು, ಕೋಗಿಲೆಯು ಬೇವನ್ನೇ ಮಾವು ಎಂದು ತಿಳಿದರೆ ನಮಗೇನಂತೆ? ಈ ಕರ್ಣನು ಕಾದಿ ಗೆಲ್ಲುವೆನೆಂದೆ, ಹಾಗಾದರೆ ಭೀಷ್ಮ, ದ್ರೋಣರೇನಾದರು ಇದನ್ನು ಯೋಚಿಸಿದ್ದೀಯ? ಆದುದಾಗಲಿ ನಾನು ಸಾರಥಿಯಾಗಲು ಒಪ್ಪುತ್ತೇನೆ, ಮೇಲೇಳು ಎಂದು ಶಲ್ಯನು ದುರ್ಯೋಧನನಿಗೆ ಹೇಳಿದ.

ಅರ್ಥ:
ದುರಾಗ್ರಹ: ಹಟಮಾರಿತನ, ಮೊಂಡ; ಚಿತ್ತ: ಮನಸ್ಸು; ತಪ್ಪು: ಸರಿಯಿಲ್ಲದ; ಕೋಗಿಲೆ: ಕೋಕಿಲ, ಪಿಕ; ಆದರಿಸಿ: ಗೌರವಿಸು, ಪ್ರೀತಿ; ಮಾವು: ಚೂತ; ಕಾದಿ: ಗೆದ್ದು; ಗೆಲುವು: ಜಯ; ಬಾರಿ: ವಶ, ಅಧೀನ; ಗುರು: ಆಚಾರ್ಯ; ಆದಿ: ಮುಂತಾದ; ಭಟರು: ಸೈನಿಕರು; ಸಾರಥಿ: ರಥವನ್ನು ಓಡಿಸುವವ; ಏಳು: ಮೇಲೇಳು;

ಪದವಿಂಗಡಣೆ:
ಈ +ದುರಾಗ್ರಹ +ನಿನ್ನ +ಚಿತ್ತದೊಳ್
ಆದುದೇ +ತಪ್ಪೇನು +ಕೋಗಿಲೆ
ಆದರಿಸಿದಡೆ +ಬೇವು +ಮಾವಹುದ್+ಆದಡ್+ಎಮಗೇನು
ಕಾದಿ +ಗೆಲುವುದು +ಬಾರಿ +ಗುರು +ಭೀ
ಷ್ಮಾದಿ+ ಭಟರೇನಾದರೈ +ತಾನ್
ಆದುದಾಗಲಿ +ನಾವು +ಸಾರಥಿಯಾದೆವ್+ಏಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೋಗಿಲೆ ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
(೨) ತಪ್ಪೇನು, ಎಮಗೇನು – ಪ್ರಾಸ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ