ಪದ್ಯ ೧೯: ದುರ್ಯೋಧನನು ಶಲ್ಯನಿಗೆ ಯಾವ ಕಾರ್ಯವನ್ನು ಮಾಡಲು ಹೇಳಿದನು?

ಮಾವ ಸಾರಥಿಯಾಗಿ ಕರ್ಣನ
ನೀವು ಕೊಂಡಾಡಿದಡೆ ಫಲುಗುಣ
ನಾವ ಪಾಡು ಸುರಾಸುರರ ಕೈಕೊಂಬನೇ ಬಳಿಕ
ಆವುದೆಮಗಭ್ಯುದಯವದ ನೀ
ನಾವ ಪರಿಯಲಿ ಮನ್ನಿಸಿದಡರೆ
ಜೀವ ಕೌರವ ವಂಶವೇ ಸಪ್ರಾಣಿಸುವುದೆಂದ (ಕರ್ಣ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಲ್ಯನು ನೇರವಾಗಿ ಯಾವ ಸಹಾಯ ಬೇಕು ಎಂದು ಕೇಳಲು, ದುರ್ಯೋಧನನು ಮಾವ ನೀವು ಕರ್ಣನಿಗೆ ಸಾರಥಿಯಾದರೆ ಅರ್ಜುನನ ಪಾಡೇನು? ನಿಮ್ಮ ಸಹಾಯವಿದ್ದರೆ ಅವನು ದೇವ ದೈತ್ಯರನ್ನು ಲೆಕ್ಕಿಸುವುದಿಲ್ಲ. ನಮ್ಮ ಅಭ್ಯುದಯ ಯಾವುದರಿಂದಾಗುವುದೋ ಅದನ್ನು ನೀವು ಮಾಡಿದರೆ, ಅರ್ಧ ಜೀವದಲ್ಲಿರುವ ಕೌರವ ವಂಶಕ್ಕೆ ಪ್ರಾಣ ಬಂದಂತಾಗುವುದು ಎಂದು ಹೇಳಿದನು.

ಅರ್ಥ:
ಸಾರಥಿ: ರಥವನ್ನು ಓಡಿಸುವವ; ಕೊಂಡಾಡು: ಹೊಗಳು; ಪಾಡು: ಸ್ಥಿತಿ; ಸುರಾಸುರ: ದೇವತೆ ಮತ್ತು ದಾನವರು; ಕೈಕೊಂಬು: ಲೆಕ್ಕಿಸು, ಗಳಿಸು; ಬಳಿಕ: ನಂತರ; ಅಭ್ಯುದಯ: ಏಳಿಗೆ; ಪರಿ: ರೀತಿ; ಮನ್ನಿಸು: ಗೌರವಿಸು; ಅರೆ: ಅರ್ಧ; ಜೀವ: ಪ್ರಾಣ; ವಂಶ: ಕುಲ; ಸಪ್ರಾಣಿಸು:ಬದುಕಿಸು;

ಪದವಿಂಗಡಣೆ:
ಮಾವ +ಸಾರಥಿಯಾಗಿ +ಕರ್ಣನ
ನೀವು +ಕೊಂಡಾಡಿದಡೆ+ ಫಲುಗುಣನ್
ಆವ +ಪಾಡು +ಸುರ+ಅಸುರರ +ಕೈಕೊಂಬನೇ +ಬಳಿಕ
ಆವುದ್+ಎಮಗ್+ಅಭ್ಯುದಯವ್+ಅದ+ ನೀನ್
ಆವ +ಪರಿಯಲಿ +ಮನ್ನಿಸಿದಡ್+ಅರೆ
ಜೀವ +ಕೌರವ +ವಂಶವೇ +ಸಪ್ರಾಣಿಸುವುದೆಂದ

ಅಚ್ಚರಿ:
(೧) ೪ ಸಾಲು ಒಂದೇ ಪದವಾಗಿ ರಚನೆ – ಆವುದೆಮಗಭ್ಯುದಯವದ

ನಿಮ್ಮ ಟಿಪ್ಪಣಿ ಬರೆಯಿರಿ