ತಾರಕನ ಮಕ್ಕಳುಗಳಿಗೆ ನೆರೆ
ಸೂರೆವೋದುದು ಸುರರ ಸಿರಿ ಮು
ಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ
ಚಾರು ವೈದಿಕ ಹವ್ಯಕವ್ಯವಿ
ಹಾರ ವೃತ್ತಿಗಳಳಿದವಿದನವ
ಧಾರಿಸೆಂದಬುಜಾಸನನು ಮಾಡಿದನು ಬಿನ್ನಹವ (ಕರ್ಣ ಪರ್ವ, ೬ ಸಂಧಿ, ೨೨ ಪದ್ಯ)
ತಾತ್ಪರ್ಯ:
ಶಿವನು ಬ್ರಹ್ಮನನ್ನು ಸಂತೈಸಿದ ಬಳಿಕ ಬ್ರಹ್ಮನು, ಎಲೈ ಶಿವನೇ, ತಾರಕಾಸುರನ ಮಕ್ಕಳು ದೇವತೆಗಳ ಐಶ್ವರ್ಯವನ್ನು ಸೂರೆಗೊಂಡರು, ದೇವತಾ ಸ್ತ್ರೀಯರನ್ನು ಅಸುರರ ದಾಸಿಯಾಗಿ ಮಾಡಿದ್ದಾರೆ. ವೈದಿಕ ಹವ್ಯಕವ್ಯಾದಿ ಕರ್ಮಗಳು ನಿಂತು ಹೋದವು. ಇದನ್ನು ಮನಸ್ಸಿಟ್ಟು ಕೇಳು ಎಂದು ಬ್ರಹ್ಮನು ಶಿವನಲ್ಲಿ ಬಿನ್ನಹ ಮಾಡಿದನು.
ಅರ್ಥ:
ಮಕ್ಕಳು: ಸುತರು; ನೆರೆ: ಪೂರ್ಣವಾಗಿ, ಹೆಚ್ಚು; ಸೂರೆ:ಕೊಳ್ಳೆ; ಸುರ: ದೇವತೆ; ಸಿರಿ: ಐಶ್ವರ್ಯ; ಮುಮ್ಮಾರುವೋಗು: ಮೊದಲೇ ಸೂರೆಯಾಗು; ಸುರ: ದೇವತೆ; ಸತಿ: ಹೆಂಡತಿ; ಖಳ: ದುಷ್ಟ; ಮನೆ: ಆಲಯ; ಚಾರು: ಸುಂದರ, ಶ್ರೇಷ್ಠವಾದ; ವೈದಿಕ: ವೇದಕ್ಕೆ ಸಂಬಂಧಿಸಿದ; ಹವ್ಯಕ: ಬ್ರಾಹ್ಮಣರ ಒಂದು ವರ್ಗ; ವ್ಯವಹಾರ: ಕರ್ಮ, ಕೆಲಸ, ಉದ್ಯೋಗ; ವೃತ್ತಿ: ಕೆಲಸ; ಅವಧರಿಸು: ಮನಸ್ಸಿಟ್ಟು ಕೇಳು; ಅಬುಜಸಾನ: ಕಮಲದ ಮೇಲೆ ಕುಳಿತ (ಬ್ರಹ್ಮ); ಬಿನ್ನಹ: ಕೋರಿಕೆ; ಅಳಿ: ನಾಶ; ಹವ್ಯ:ಹೋಮದ ಮೂಲಕ ದೇವತೆಗಳಿಗೆ ಕೊಡುವ ಆಹುತಿ, ಹವಿಸ್ಸು; ಕವ್ಯ: ಪಿತೃಗಳಿಗೆ ಅರ್ಪಿಸುವ ಯಜ್ಞ; ವಿಹಾರ: ಯಾಗಾದಿ,ತಿರುಗಾಡು;
ಪದವಿಂಗಡಣೆ:
ತಾರಕನ+ ಮಕ್ಕಳುಗಳಿಗೆ +ನೆರೆ
ಸೂರೆವೋದುದು+ ಸುರರ+ ಸಿರಿ+ ಮು
ಮ್ಮಾರುವೋದುದು +ಸುರರ+ ಸತಿಯರು +ಖಳರ +ಮನೆಗಳಿಗೆ
ಚಾರು +ವೈದಿಕ+ ಹವ್ಯ+ಕವ್ಯ+ವಿ
ಹಾರ +ವೃತ್ತಿಗಳಳ್+ಅಳಿದವ್+ಇದನ್+ಅವ
ಧಾರಿಸ್+ಎಂದ್+ಅಬುಜಾಸನನು +ಮಾಡಿದನು +ಬಿನ್ನಹವ
ಅಚ್ಚರಿ:
(೧) ಬ್ರಹ್ಮನನ್ನು ಅಬುಜಾಸನ ಎಂದು ಕರೆದಿರುವುದು
(೨) ಮೊದಲೇ ದೇವತೆಗಳು ಸೋತರು ಎಂದು ಹೇಳಲು – ಮುಮ್ಮಾರುವೋದುದು ಸುರರ ಸತಿಯರು ಖಳರ ಮನೆಗಳಿಗೆ