ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಿಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸುಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ (ಕರ್ಣ ಪರ್ವ, ೩ ಸಂಧಿ, ೯ ಪದ್ಯ)
ತಾತ್ಪರ್ಯ:
ತಮ್ಮ ಬಲವು ತಗ್ಗಲು ವಿಂದಾನುವಿಂದರು ಮುಂದೆ ನುಗ್ಗಿ ಸಾತ್ಯಕಿಯನ್ನು ಬಾಣಗಳಿಂದ ಮುಚ್ಚಿದರು. ಆಹಾ ಬಾಣಗಳು ಚೆನ್ನಾಗಿ ಬರುತ್ತಿವೆ, ಶಿವ ಶಿವಾ ರಾಜರಲ್ಲವೇ ಮಹಾ ಸಾಹಸಿಗರಲ್ಲವೇ ನೀವು, ಎಂದು ಸಾತ್ಯಕಿಯು ಬಾಣಗಳನ್ನು ಬಿಟ್ಟನು.
ಅರ್ಥ:
ದೊರೆ: ರಾಜ; ಅವದಿರು: ಅವರು; ಬಲ: ಸೈನ್ಯ; ಸಂವರಣೆ: ಸಜ್ಜು, ಸನ್ನಾಹ; ನೆಗ್ಗು:ಕುಗ್ಗು, ಕುಸಿ; ಹೇವ:ಮಾನ, ಹಗ್; ಹೊಡಕರಿಸು: ಕಾಣಿಸು; ಹೊಕ್ಕು: ಸೇರಿ; ಹೂಳು: ನೆಲದಲ್ಲಿ ಹುದುಗಿಸು; ಅಂಬು: ಬಾಣ; ಸರಳ: ಬಾಣ; ಬರವೊಳು: ಬರುವು, ಆಗಮನ; ಮಹಾದೇವ: ಶಿವ; ಅರಸು: ರಾಜ; ಮಕ್ಕಳು: ಸುತರ್; ವಿರೋಧ: ವೈರತ್ವ; ಹರಹರ: ಶಿವ ಶಿವಾ; ಸಾಹಸಿ: ಪರಾಕ್ರಮಿ; ಅಹುದು: ಹೌದು; ತೆಗೆ: ಹೊರಗೆ ತರು;
ಪದವಿಂಗಡಣೆ:
ದೊರೆಗಳ್+ಅವದಿರು +ತಮ್ಮ +ಬಲ +ಸಂ
ವರಣೆ +ನೆಗ್ಗಿದ+ ಹೇವದಲಿ+ ಹೊಡ
ಕರಿಸಿ +ಹೊಕ್ಕರು +ಹೂಳಿದರು +ಸಾತ್ಯಕಿಯನ್+ಅಂಬಿನಲಿ
ಸರಳ +ಬರವೊಳ್ಳಿತು +ಮಹಾ ದೇವ್
ಅರಸು+ಮಕ್ಕಳಲೇ +ವಿರೋಧವೆ
ಹರಹರ್+ಅತಿಸಾಹಸಿಕರ್+ಅಹುದ್+ಅಹುದೆನುತ+ ತೆಗೆದೆಚ್ಚ
ಅಚ್ಚರಿ:
(೧) ಹ ಕಾರದ ಪದಗಳ ಬಳಕೆ – ಹೇವ, ಹೊಡಕರಿಸು, ಹೂಳು, ಹರಹರ
(೨) ಅಂಬು, ಸರಳ – ಸಮನಾರ್ಥಕ ಪದ