ಥಟ್ಟು ಮುರಿದುದು ಕೊಂಡ ನೆಲನನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜನ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ (ಕರ್ಣ ಪರ್ವ, ೩ ಸಂಧಿ, ೬ ಪದ್ಯ)
ತಾತ್ಪರ್ಯ:
ನಿಮ್ಮ ಸೈನ್ಯ ಮುರಿದು ಬಿದ್ದಿದೆ ನಿಂತ ಜಾಗವನ್ನು ಬಿಟ್ಟೋಡಿತು, ನಮ್ಮ ಸೈನ್ಯದವರು ಪರಾಕ್ರಮವನ್ನು ತೋರಿ ನಿಮ್ಮ ಸೈನ್ಯವನ್ನು ಭೇದಿಸಿ ಸಾತ್ಯಕಿಯು ರಾಜರಿದಿರಲ್ಲಿ ಬಂದು ನಿಂತನು. ಯಾರಿವನು ಇಷ್ಟು ಶೂರ, ಪರಾಕ್ರಮವನ್ನು ತೋರಿ ಇಲ್ಲಿ ಬಂದಿದ್ದಾನೆ ಎಂದುಕೊಂಡು ವಿಂದಾನುವಿಂದರು ಸಾತ್ಯಕಿಯ ಎದುರು ನಿಂತರು.
ಅರ್ಥ:
ಥಟ್ಟು: ಪಕ್ಕ, ಕಡೆ, ಗುಂಪು; ಮುರಿ: ಸೀಳು; ಕೊಂಡು: ತೆಗೆದು; ನೆಲ: ಭೂಮಿ; ಬಿಟ್ಟು: ತೊರೆದು; ಹಿಂದು: ಬತ್ತುಹೋಗು; ಬಲ: ಸೈನ್ಯ; ಮೈ:ತನು; ತಲೆ: ಶಿರ; ತೋರು: ಗೋಚರಿಸು; ದೊರೆ: ರಾಜ; ಇದಿರು: ಎದುರು; ದಿಟ್ಟ: ಧೈರ್ಯಶಾಲಿ, ಸಾಹಸಿ;ಈಸು: ಇಷ್ಟು; ಮುಷ್ಟಾಮುಷ್ಟಿ: ಬಲಶಾಲ್; ಬಂದವನು: ಆಗಮಿಸು; ಜಟ್ಟಿ: ಪರಾಕ್ರಮಿ, ಶೂರ; ನಿಂದರು: ನಿಲ್ಲು;
ಪದವಿಂಗಡಣೆ:
ಥಟ್ಟು +ಮುರಿದುದು +ಕೊಂಡ +ನೆಲನನು
ಬಿಟ್ಟು+ ಹಿಂಗಿತು+ ನಮ್ಮ +ಬಲ+ ಮೈ
ಬಿಟ್ಟು +ತಲೆದೋರಿದನು+ ಸಾತ್ಯಕಿ +ದೊರೆಗಳ್+ಇದಿರಿನಲಿ
ದಿಟ್ಟನಾರಿವನ್+ಈಸು +ಮುಷ್ಟಾ
ಮುಷ್ಟಿಯಲಿ +ಬಂದವನೆನುತ +ಜನ
ಜಟ್ಟಿಗಳು +ವಿಂದಾನುವಿಂದರು +ನಿಂದರ್+ಇದಿರಿನಲಿ
ಅಚ್ಚರಿ:
(೧) ಮುಷ್ಟಾಮುಷ್ಟಿ, ಜನಜಟ್ಟಿ, ದಿಟ್ಟ – ಶೂರನೆಂದು ವರ್ಣಿಸಲು ಬಳಸಿದ ಪದಗಳು
(೨) ಪರಾಕ್ರಮದಿಂದ ಹೋರಾಡಿದರು ಎಂದು ಹೇಳಲು – ಮೈಬಿಟ್ಟು ತಲೆದೋರಿದನು