ಪದ್ಯ ೨೬: ಕರ್ಣನಿಗೆ ಸೇನಾಧಿಪತ್ಯ ಪಟ್ಟ ಕಟ್ಟುವ ಪ್ರಸ್ತಾಪಕ್ಕೆ ಅಶ್ವತ್ಥಾಮನ ಅಭಿಪ್ರಾಯವೇನು?

ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ (ಕರ್ಣ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲ್ಲರೂ ಅಶ್ವತ್ಥಾಮನ ಕಡೆ ನೋಡಲು, ನಮ್ಮನ್ನು ತೋರಿಸಲು ಹೋಗಬೇಡಿ, ನಿನ್ನ ಮನಸ್ಸಿಗೆ ಬಂದಂತೆ ಮಾಡು, ನಮ್ಮ ಮನೋವ್ಯಥೆಯನ್ನು ಬಾಯಿ ಬಿಟ್ಟು ಆಡಿ ಫಲವೇನು? ನಮ್ಮ ಪುಣ್ಯಾ ಬೆಳೆಗಳು ಒಣಗಿ ಹೋದವು. ಹೋರಾಡಿ ಏನು ಮಾಡಬಹುದು ಕರ್ಣನೇ ನಮ್ಮ ಸೇನಾಧಿಪತಿ ಎಂದು ಅಶ್ವತ್ಥಾಮನು ನುಡಿದನು.

ಅರ್ಥ:
ಎಮ್ಮ: ನಮ್ಮ; ತೋರು: ಗೋಚರ, ಕಾಣು; ಸುಖ: ಆನಂದ, ಸಂತೋಷ; ಚಿತ್ತ: ಮನಸ್ಸು; ಬಹುದು: ಬರುವುದೋ; ಮಾಡು: ಕಾರ್ಯ ರೂಪಕ್ಕೆ ತರುವುದು; ಹೃದಯ: ವಕ್ಷಸ್ಥಳ; ವ್ಯಥೆ: ದುಃಖ; ಫಲ: ಪ್ರಯೋಜನ; ಪುಣ್ಯ:ಸದಾಚಾರ; ಬೆಳೆ: ಪೈರು; ಒಣಗು: ಬಾಡು, ಸಾರಹೀನ; ದಳವಾಯಿ: ಸೇನಾಧಿಪತಿ; ಅರಸ: ರಾಜ;

ಪದವಿಂಗಡಣೆ:
ಎಮ್ಮ +ತೋರಿಸಬೇಡ +ಸುಖದಲಿ
ನಿಮ್ಮ +ಚಿತ್ತಕೆ +ಬಹುದ +ಮಾಡುವುದ್
ಎಮ್ಮ +ಹೃದಯ +ವ್ಯಥೆಯ +ನಾವಿನ್ನಾಡಿ +ಫಲವೇನು
ಎಮ್ಮ +ಪುಣ್ಯದ +ಬೆಳೆಗಳ್+ಒಣಗಿದ
ಡಮ್ಮಿ +ಮಾಡುವುದೇನು +ಕರ್ಣನು
ನಮ್ಮ +ದಳವಾಯೆಂದನ್+ಅಶ್ವತ್ಥಾಮನ್+ಅರಸಂಗೆ

ಅಚ್ಚರಿ:
(೧) ಎಮ್ಮ – ೩ ಬಾರಿ ಪ್ರಯೋಗ
(೨) ಪುಣ್ಯವು ಹೋಯಿತೆನಲು ಬೆಳೆಗಳ ಉಪಮಾನ – ಎಮ್ಮ ಪುಣ್ಯದ ಬೆಳೆಗಳೊಣಗಿದಡಮ್ಮಿ ಮಾಡುವುದೇನು

ನಿಮ್ಮ ಟಿಪ್ಪಣಿ ಬರೆಯಿರಿ