ಬಲದ ಮುಂಗುಡಿ ಭೀಮನದು ಪಿಂ
ತಿಳೆಯೊಳಾತನ ಕಾಹು ಬೀಡಿನ
ವಳಯದಾರೈಕೆಗಳು ಸಾತ್ಯಕಿ ನಕುಲ ಪಾರ್ಥರಿಗೆ
ಬಲಮಹಾಂಬುಧಿಯೊಳಗಿರುಳು ಮೇ
ಲ್ತಳವರನು ಹೈಡಿಂಬಿ ಪಾಂಡವ
ರುಳಿವು ಗದುಗಿನ ವೀರನಾರಾಯಣನ ಸುಯಿದಾನ (ಉದ್ಯೋಗ ಪರ್ವ, ೧೨ ಸಂಧಿ, ೪೯ ಪದ್ಯ)
ತಾತ್ಪರ್ಯ:
ಪಾಂಡವರ ಸೈನ್ಯದ ಮುಂಚೂಣಿ ಭೀಮನದು, ಹಿಂಭಾಗದಲ್ಲೂ ಸಹ ಅವನದೇ ಕಾವಲಿತ್ತು, ಬೀಡಿನ ಎಲ್ಲರ ಅನುಕೂಲಗಳನ್ನು ನೋಡಿಕೊಳ್ಳುವವರು ಸಾತ್ಯಕಿ, ಅರ್ಜುನ, ನಕುಲರು. ಆ ಮಹಾಸೈನ್ಯ ಸಮುದ್ರವನ್ನು ರಾತ್ರಿಯಲ್ಲಿ ಕಾಯುವವನು ಘಟೋತ್ಕಚ, ಗದುಗಿನ ವೀರನಾರಾಯಣ (ಶ್ರೀ ಕೃಷ್ಣ) ಪಾಂಡವರ ರಕ್ಷಣೆಗೆ ನಿಂತನು.
ಅರ್ಥ:
ಬಲ: ಸೈನ್ಯ, ಮುಂಗುಡಿ: ಮುಂಚೂಣಿ, ಮುಂದೆ; ಪಿಂತಿಳೆ: ಹಿಂಬದಿ; ಕಾಹು: ಕಾವಲು; ಬೀಡು: ಗೂಡಾರ; ವಳಯ: ವರ್ತುಲ, ಅಂಗಳ, ಆವರಣ; ಆರೈಕೆ: ಶುಶ್ರೂಷೆ; ಅಂಬುಧಿ: ಸಾಗರ; ಇರುಳು: ರಾತ್ರಿ; ಮೇಲ್ತಳ: ಮೇಲಿಂದ ನೋಡಿಕೊ, ಕಾಪಾಡು; ಹೈಡಿಂಬಿ: ಘಟೋತ್ಕಚ; ಉಳಿವು: ರಕ್ಷಣೆ; ಸುಯಿದಾನ: ರಕ್ಷಣೆ;
ಪದವಿಂಗಡಣೆ:
ಬಲದ +ಮುಂಗುಡಿ+ ಭೀಮನದು +ಪಿಂ
ತಿಳೆಯೊಳ್+ಆತನ +ಕಾಹು +ಬೀಡಿನ
ವಳಯದ್+ಆರೈಕೆಗಳು +ಸಾತ್ಯಕಿ +ನಕುಲ +ಪಾರ್ಥರಿಗೆ
ಬಲಮಹ+ಅಂಬುಧಿಯೊಳಗ್+ಇರುಳು +ಮೇ
ಲ್ತಳವರನು+ ಹೈಡಿಂಬಿ +ಪಾಂಡವರ್
ಉಳಿವು +ಗದುಗಿನ +ವೀರನಾರಾಯಣನ +ಸುಯಿದಾನ
ಅಚ್ಚರಿ:
(೧) ಕಾಹು, ಉಳಿವು, ಸುಯಿದಾನ – ರಕ್ಷಣೆಯ ಸಾಮ್ಯಾರ್ಥ ಪದಗಳು