ದರುಶನವನಿತ್ತಖಿಳ ಧರಣೀ
ಶ್ವರರು ಕಂಡರು ಸೂತ ಮಾಗಧ
ವರವಿಬುಧವೈತಾಳಿಕರ ಕಾರ್ಪಣ್ಯವಡಗಿದವು
ಧುರಕೆ ಧೃಷ್ಟದ್ಯುಮ್ನನಾಜ್ಞೆಯೊ
ಳಿರವು ನಿಮಗೆಂದೈದೆ ಭೂಪಾ
ಲರ ನಿವಾಸಂಗಳೊಳು ಹೊಯ್ಸಿದರಂದು ಡಂಗುರವ (ಉದ್ಯೋಗ ಪರ್ವ, ೧೨ ಸಂಧಿ, ೩೫ ಪದ್ಯ)
ತಾತ್ಪರ್ಯ:
ಸಮಸ್ತ ರಾಜರೂ ಧೃಷ್ಟದ್ಯುಮ್ನನನ್ನು ಕಂಡು ಸನ್ಮಾನಿಸಿದರು. ಹೊಗಳುಭಟ್ಟರು, ಸೂತ, ವಂದಿ ಮಾಗಧ, ವಿದ್ವಾಂಸ, ವೈತಾಳಿಕರಿಗೆ ಹೇರಳವಾಗಿ ಹಣವನ್ನು ಕೊಟ್ಟರು. ಧೃಷ್ಟದ್ಯುಮ್ನನ ಆಜ್ಞೆಯಂತೆ ಯುದ್ಧದಲ್ಲಿ ನಡೆಯಬೇಕೆಂದು ಎಲ್ಲ ರಾಜರ ನಿವಾಸಗಳಲ್ಲೂ ಡಂಗುರ ಹೊಡಿಸಿದರು.
ಅರ್ಥ:
ದರುಶನ: ತೋರು; ಅಖಿಳ: ಎಲ್ಲಾ; ಧರಣಿ: ಭೂಮಿ; ಧರಣೀಶ್ವರರು: ರಾಜರು; ಕಂಡರು: ತೋರಿದರು; ಸೂತ, ವಂದಿ: ಹೊಗಳು ಭಟ್ಟ, ಮಾಗಧ: ಸ್ತುತಿಪಾಠಕ; ವಿಬುಧ: ಪಂಡಿತ, ವಿದ್ವಾಂಸ; ವೈತಾಳಿಕ: ಹೊಗಳುಭಟ್ಟ; ಕಾರ್ಪಣ್ಯ: ಬಡತನ; ಅಡಗು: ಅವಿತುಕೊಳ್ಳು; ಧುರ:ಯುದ್ಧ, ಕಾಳಗ; ಆಜ್ಞೆ: ಅಪ್ಪಣೆ; ಭೂಪಾಲ: ರಾಜ; ನಿವಾಸ: ಆಲಯ; ಹೊಯ್ಸು: ಹೊಡಿಸು; ಡಂಗುರ: ಪ್ರಚಾರಮಾಡು;
ಪದವಿಂಗಡಣೆ:
ದರುಶನವನಿತ್+ಅಖಿಳ +ಧರಣೀ
ಶ್ವರರು +ಕಂಡರು +ಸೂತ +ಮಾಗಧ
ವರ+ವಿಬುಧ+ ವೈತಾಳಿಕರ+ ಕಾರ್ಪಣ್ಯವ್+ಅಡಗಿದವು
ಧುರಕೆ+ ಧೃಷ್ಟದ್ಯುಮ್ನನ್+ಆಜ್ಞೆಯೊಳ್
ಇರವು+ ನಿಮಗೆಂದೈದೆ +ಭೂಪಾ
ಲರ +ನಿವಾಸಂಗಳೊಳು +ಹೊಯ್ಸಿದರಂದು+ ಡಂಗುರವ
ಅಚ್ಚರಿ:
(೧) ಹೇರಳವಾಗಿ ಹಣ ನೀಡಿದರು ಎಂದು ಹೇಳಲು – ಕಾರ್ಪಣ್ಯವಡಗಿದವು