ಪರಿಮಿತಕೆ ತನ್ನಾಪ್ತ ಸಚಿವರ
ಕರೆಸಿಕೊಂಡನು ಕೃಷ್ಣರಾಯಂ
ಗರಸ ಬಿನ್ನಹ ಮಾಡಿದನು ನೃಪಕಾರ್ಯ ಸಂಗತಿಯ
ಧುರಕೆ ಸೇನಾನಾಥರಿಲ್ಲದೆ
ನೆರೆದ ಬಲ ಸಾಲಿರುಹೆ ಮುರಿದೊಡೆ
ಹರೆವವೊಲು ಹುರುಳಿಲ್ಲ ದಳಪತಿ ಯಾವನಹನೆಂದ (ಉದ್ಯೋಗ ಪರ್ವ, ೧೨ ಸಂಧಿ, ೩೦ ಪದ್ಯ)
ತಾತ್ಪರ್ಯ:
ಧರ್ಮಜನು ಸಚಿವರ ಪರಿಮಿತಿ ಸಭೆಯನ್ನು ಕರೆದು ಕೃಷ್ಣನಲ್ಲಿ ವಿಜ್ಞಾಪಿಸಿಕೊಂಡನು, ಯುದ್ಧದಲ್ಲಿ ಸೈನ್ಯಕೊಬ್ಬ ಸೇನಾಪತಿಯಿರಬೇಕು, ಇಲ್ಲದಿದ್ದರೆ ಸಾಲು ಕಟ್ಟಿದ ಇರುವೆಗಳ ಸಾಲುಮುರಿದರೆ, ಇರುವೆಗಳು ಎಲ್ಲೆಂದರಲ್ಲಿಗೆ ಹೋಗುವಂತೆ ಸತ್ವವೇ ಕುಂದಿ ಹೋಗುತ್ತದೆ, ಅದಕ್ಕಾಗಿ ಯಾರು ದಳಪತಿಯಾಗಬೇಕೆಂದು ಕೇಳಿದನು.
ಅರ್ಥ:
ಪರಿಮಿತಿ: ಎಲ್ಲೆ, ಮೇರೆ; ಆಪ್ತ: ಹತ್ತಿರದವ; ಸಚಿವ: ಮಂತ್ರಿ; ಕರೆಸು: ಬರೆಮಾಡು; ರಾಯ: ರಾಜ; ಅರಸ: ರಾಜ; ಬಿನ್ನಹ: ಕೋರಿಕೆ; ನೃಪ: ರಾಜ; ಕಾರ್ಯ: ಕೆಲಸ; ಸಂಗತಿ: ವಿವರ, ಸಮಾಚಾರ; ಧುರ: ಯುದ್ಧ, ಕಾಳಗ; ಸೇನ: ಸೈನ್ಯ; ಅನಾಥ: ತಬ್ಬಲಿ, ನಿರ್ಗತಿಕ; ನೆರೆ: ಗುಂಪು; ಬಲ: ಶಕ್ತಿ, ಸೈನ್ಯ; ಸಾಲು: ರೇಖೆ; ಇರುಹೆ: ಇರುವೆ; ಮುರಿ: ಸೀಳು; ಹರಿ: ಚಲಿಸು, ಪ್ರವಹಿಸು; ಹುರುಳು: ಸತ್ತ್ವ, ಸಾರ; ದಳಪತಿ: ಸೇನಾಧಿಪತಿ; ಬೇಕು: ಇಚ್ಛಿಸು; ಯಾವನು: ಯಾರು;
ಪದವಿಂಗಡಣೆ:
ಪರಿಮಿತಕೆ +ತನ್+ಆಪ್ತ +ಸಚಿವರ
ಕರೆಸಿಕೊಂಡನು +ಕೃಷ್ಣ+ರಾಯಂಗ್
ಅರಸ+ ಬಿನ್ನಹ +ಮಾಡಿದನು +ನೃಪ+ಕಾರ್ಯ +ಸಂಗತಿಯ
ಧುರಕೆ+ ಸೇನ+ಅನಾಥರಿಲ್ಲದೆ
ನೆರೆದ+ ಬಲ +ಸಾಲ್+ಇರುಹೆ +ಮುರಿದೊಡೆ
ಹರೆವವೊಲು +ಹುರುಳಿಲ್ಲ +ದಳಪತಿ+ ಯಾವನಹನೆಂದ
ಅಚ್ಚರಿ:
(೧) ರಾಯ, ಅರಸ, ನೃಪ – ಸಮನಾರ್ಥಕ ಪದಗಳು
(೨) ‘ಹ’ ಕಾರದ ಜೋಡಿ ಪದ – ಹರೆವವೊಲು ಹುರುಳಿಲ್ಲ