ಪದ್ಯ ೩೬: ಕರ್ಣನು ಕುಂತಿಗೆ ಯಾವ ಮಾತನ್ನು ಕೋಟ್ಟನು?

ಆದೊಡೈವರು ಮಕ್ಕಳನು ತಲೆ
ಗಾದು ತೋರೈ ಕಂದ ನಿನಗೇ
ನೀ ದುರಾಗ್ರಹವೊಪ್ಪುವುದೆ ಕೌರವನ ಸೇವೆಯೊಳು
ಹೋದ ಬಾಣವ ಮರಳಿ ತೊಡದಿರು
ಮಾದು ಕಳೆ ವೈರವನೆನಲ್ಕೆ ಹ
ಸಾದವೆಂದನು ಬೀಳುಕೊಂಡನು ಬಂದನರಮನೆಗೆ (ಉದ್ಯೋಗ ಪರ್ವ, ೧೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕುಂತಿಯು ಕರ್ಣನಿಗೆ ತನ್ನ ಮನಸ್ಸಿನಲ್ಲಿದುದನು ಹೇಳುತ್ತಾ, ಕರ್ಣ ನೀನು ದುರ್ಯೋಧನನ ಸೇವೆಯಲ್ಲಿ ಇರುವೆನೆಂಬ ಹಠಮಾರಿತನವನ್ನು ನೀನು ಬಿಡುವುದಿಲ್ಲ. ನನ್ನೈವರ ಮಕ್ಕಳನ್ನು ಕೊಲ್ಲದೆ ಉಳಿಸು, ತೊಟ್ಟ ಬಾಣವನ್ನು ಮತ್ತೆ ತೊಡಬೇಡ, ಪಾಂಡವರ ಬಗ್ಗೆ ವೈರತ್ವವನ್ನು ಬಿಟ್ಟುಬಿಡು ಎಂದು ಕುಂತಿ ಹೇಳಲು ಕರ್ಣನು ಮಹಾಪ್ರಸಾದ ವೆಂದು ಹೇಳಿ ಕುಂತಿಯನ್ನು ಬೀಳ್ಕೊಟ್ಟು ತನ್ನರಮನೆಗೆ ಬಂದನು.

ಅರ್ಥ:
ಮಕ್ಕಳು: ಸುತರು; ತಲೆ: ಶಿರ; ಕಾದು: ಕಾಪಾಡು; ತೋರು: ಗೋಚರಿಸು; ಕಂದ: ಮಗು; ದುರಾಗ್ರಹ: ಹಟಮಾರಿತನ, ಮೊಂಡ; ಸೇವೆ: ಊಳಿಗ, ಚಾಕರಿ; ಹೋದ: ಬಿಟ್ಟ; ಬಾಣ: ಅಂಬು; ಮರಳಿ: ಮತ್ತೆ; ತೊಡು: ಉಡು; ಮಾಡು:ಬಿಡು; ಕಳೆ: ತೊರೆ; ವೈರ: ಹಗೆ; ಎನಲ್ಕೆ: ಎಂದು ಹೇಳಲು; ಹಸಾದ: ಪ್ರಸಾದ; ಬೀಳುಕೊಂಡು: ಹೊರಟನು; ಅರಮನೆ: ರಾಜರ ಆಲಯ; ಬಂದು: ಆಗಮಿಸು;

ಪದವಿಂಗಡಣೆ:
ಆದೊಡ್+ಐವರು +ಮಕ್ಕಳನು +ತಲೆ
ಕಾದು +ತೋರೈ +ಕಂದ +ನಿನಗೇನ್
ಈ+ ದುರಾಗ್ರಹವ್+ಒಪ್ಪುವುದೆ +ಕೌರವನ+ ಸೇವೆಯೊಳು
ಹೋದ +ಬಾಣವ +ಮರಳಿ +ತೊಡದಿರು
ಮಾದು +ಕಳೆ +ವೈರವನ್+ಎನಲ್ಕೆ +ಹ
ಸಾದವೆಂದನು+ ಬೀಳುಕೊಂಡನು +ಬಂದನ್+ಅರಮನೆಗೆ

ಅಚ್ಚರಿ:
(೧) ಕಾದು, ಮಾದು – ಪ್ರಾಸ ಪದಗಳು
(೨) ಮಕ್ಕಳು, ಕಂದ – ಸಾಮ್ಯಾರ್ಥ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ