ಬಲದ ಗದ್ದುಗೆಗಳಲಿ ಭಟರ
ಗ್ಗಳೆಯ ರವಿಸುತ ನದಿಯ ಮಗ ನೃಪ
ತಿಲಕ ದುಶ್ಯಾಸನ ಕೃಪ ದ್ರೋಣಾದಿ ನಾಯಕರು
ಹೊಳೆವ ರತುನದ ಸಾಲ ಮಕುಟದ
ಚೆಲುವಿಕೆಯ ಸೌರಂಭದಲಿ ಗಜ
ಗಲಿಸಿದರು ಮಾಣಿಕ್ಯಮಯ ಭೂಷಣ ವಿಳಾಸದಲಿ (ಉದ್ಯೋಗ ಪರ್ವ, ೮ ಸಂಧಿ, ೩೦ ಪದ್ಯ)
ತಾತ್ಪರ್ಯ:
ಒಡ್ಡೋಲಗವು ರಾಜರ, ಶ್ರೇಷ್ಠ ವ್ಯಕ್ತಿಗಳಿಂದ ಅಲಂಕೃತವಾಗಿತ್ತು. ಸಾಮರ್ಥ್ಯವುಳ್ಳ ಸೈನಿಕರು, ಶ್ರೇಷ್ಠನಾದ ಕರ್ಣನು, ಭೀಷ್ಮರು, ಧೃತರಾಷ್ಟ್ರ, ದುರ್ಯೋಧನ, ದುಶ್ಯಾಸನ, ಕೃಪಾಚಾರ್ಯರು, ದ್ರೋಣ ಮುಂತಾದ ನಾಯಕರು ಚಿನ್ನದ ಆಸನದಲ್ಲಿ ಆಸೀನರಾಗಿದ್ದರು. ಅವರು ಧರಿಸಿದ್ದ ಕಿರೀಟದಿಂದ ಹೊಳೆವ ಕಾಂತಿಯು, ಸಾಲಿನಲ್ಲಿ ಕಾಣುವ ಅವರ ಮುಕುಟದ ಸೌಂದರ್ಯವು ಮತ್ತು ಕಾಂತಿಯು ಇಡೀ ಸಭೆಯನ್ನು ಮಾಣಿಕ್ಯಮಯವಂತಾಗಿಸಿತು.
ಅರ್ಥ:
ಬಲ: ಶಕ್ತಿ, ಸಾಮರ್ಥ್ಯ; ಗದ್ದುಗೆ: ಸಿಂಹಾಸನ; ಭಟ: ಸೈನಿಕ, ಶೂರ; ಅಗ್ಗ:ಶ್ರೇಷ್ಠತೆ; ರವಿಸುತ: ಕರ್ಣ; ಸುತ: ಮಗ; ರವಿ: ಸೂರ್ಯ; ನದಿಯಮಗ: ಭೀಷ್ಮ; ನದಿ: ಹೊಳೆ, ತೊರೆ; ನೃಪ: ರಾಜ; ತಿಲಕ: ಅಗ್ರಗಣ್ಯ, ಶ್ರೇಷ್ಠ; ಆದಿ: ಮುಂತಾದ; ನಾಯಕ: ಮುಖಂಡ; ಹೊಳೆ: ಪ್ರಕಾಶಿಸು; ರತುನ: ಮಣಿ; ಸಾಲ: ಆವಳಿ, ಪ್ರಾಕಾರ; ಮಕುಟ: ಕಿರೀಟ; ಚೆಲುವು: ಸುಂದರ; ಸೌರಂಭ: ಸಂಭ್ರಮ, ಸಡಗರ; ಗಜಗಲಿಸು: ಹೊಳೆ, ಪ್ರಕಾಶಿಸು; ಮಾಣಿಕ್ಯ: ರತ್ನ; ಮಯ: ವ್ಯಾಪಿಸಿರುವುದು; ಭೂಷಣ: ಅಲಂಕರಿಸುವುದು; ವಿಳಾಸ: ಆಸ್ಥಾನ, ನಿವಾಸ;
ಪದವಿಂಗಡಣೆ:
ಬಲದ +ಗದ್ದುಗೆಗಳಲಿ +ಭಟರ್
ಅಗ್ಗಳೆಯ +ರವಿಸುತ +ನದಿಯ ಮಗ+ ನೃಪ
ತಿಲಕ+ ದುಶ್ಯಾಸನ +ಕೃಪ +ದ್ರೋಣಾದಿ +ನಾಯಕರು
ಹೊಳೆವ +ರತುನದ+ ಸಾಲ +ಮಕುಟದ
ಚೆಲುವಿಕೆಯ +ಸೌರಂಭದಲಿ +ಗಜ
ಗಲಿಸಿದರು +ಮಾಣಿಕ್ಯಮಯ +ಭೂಷಣ +ವಿಳಾಸದಲಿ
ಅಚ್ಚರಿ:
(೧) ಕರ್ಣ ಮತ್ತು ಭೀಷ್ಮರನ್ನು ರವಿಸುತ, ನದಿಯ ಮಗ ಎಂದು ಕರೆದಿರುವುದು
(೨) ಮಗ, ಸುತ; ರತುನ, ಮಾಣಿಕ್ಯ; ಹೊಳೆ, ಗಜಗಲಿಸು – ಸಮನಾರ್ಥಕ ಪದ