ನಡುವೆ ಮಣಿಮಂಚದಲಿ ಮೇಲ್ವಾ
ಸಡಕಿಲನು ಹಚ್ಚಡಿಸಿದರು ಮೇ
ಲಡರಿದವು ಮಣಿಖಚಿತ ಚಿತ್ರದ ಮೇಲುಕಟ್ಟುಗಳು
ಉಡುಗೊರೆಯ ತರಿಸಿದನು ರಾಯನ
ಮಡದಿಯರು ಹೊಂಗಳಸ ಜಲವನು
ಪಡಿಗವನು ಹಿಡಿದಸುರರಿಪುವಿನ ಬರವ ಹಾರಿದರು (ಉದ್ಯೋಗ ಪರ್ವ, ೮ ಸಂಧಿ, ೩ ಪದ್ಯ)
ತಾತ್ಪರ್ಯ:
ಕೃಷ್ಣನ ಆಗಮನಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ರತ್ನಮಣಿಗಳಿಂದ ಅಲಂಕೃತವಾದ ಆಸನವು ಮಧ್ಯದಲ್ಲಿಡಿಸಲಾಗಿತ್ತು, ಅದರ ಮೇಲ್ಭಾಗದಲ್ಲಿ ಛತ್ರಿಯನ್ನು ಹೋಲುವಂತೆ ಕುಚ್ಚಿನ ಅಲಂಕಾರವನ್ನು ಮಾಡಿ ಚಿತ್ರಗಳಿಂದ ಅಲಂಕರಿಸಲಾಗಿತ್ತು. ಕೃಷ್ಣನಿಗೆ ಬಳುವಳಿಗಳನ್ನು ರಾಜನು ತರಿಸಿದನು, ರಾಯನ ಮಡದಿಯರು ಜಲದಿಂದ ಕೂಡಿದ ಕಳಸವನ್ನು ಬಾಗಿಲ ಬಳಿ ಹಿಡಿದು ಕೃಷ್ಣನ ಆಗಮನವನ್ನು ಎದುರುನೋಡುತ್ತಿದ್ದರು.
ಅರ್ಥ:
ನದುವೆ: ಮಧ್ಯ; ಮಣಿ: ರತ್ನ; ಮಂಚ: ಆಸನ; ಸಡಕು: ಅಲಂಕಾರಕ್ಕಾಗಿ ಕಟ್ಟುವ ಕುಚ್ಚು; ಹಚ್ಚು: ಅಂಟಿಸು, ತೊಡಗಿಸು; ಅಡರು: ಮೇಲಕ್ಕೆ ಹತ್ತು, ಆಸರೆ; ಖಚಿತ: ಕೂಡಿಸಿದ; ಚಿತ್ರ: ಪಟ; ಕಟ್ಟು:ಹೂಡು; ಉಡುಗೊರೆ: ಕಾಣಿಕೆ, ಬಳುವಳಿ; ತರಿಸು: ಬರೆಮಾದು; ರಾಯ: ರಾಜ; ಮಡದಿ: ಹೆಂಡತಿ; ಕಳಶ: ಕುಂಭ; ಜಲ: ನೀರು; ಪಡಿ: ಬಾಗಿಲು, ಸಮಾನವಾದುದು, ಅಳತೆಯ ಪ್ರಮಾಣ; ಹಿಡಿದು: ತಳೆ, ಗ್ರಹಿಸು;ಅಸುರರಿಪು: ಕೃಷ್ಣ; ಅಸುರ; ರಾಕ್ಷಸ; ರಿಪು: ವೈರಿ; ಬರವ: ಆಗಮನ; ಹಾರು:ನೋಡು; ಪಡಿಗ: ತೊಳೆದ ನೀರನ್ನು ಗ್ರಹಿಸುವ ಪಾತ್ರೆ
ಪದವಿಂಗಡಣೆ:
ನಡುವೆ +ಮಣಿಮಂಚದಲಿ +ಮೇಲ್ವಾ
ಸಡಕಿಲನು +ಹಚ್ಚಡಿಸಿದರು+ ಮೇ
ಲಡರಿದವು +ಮಣಿಖಚಿತ +ಚಿತ್ರದ+ ಮೇಲು+ಕಟ್ಟುಗಳು
ಉಡುಗೊರೆಯ +ತರಿಸಿದನು +ರಾಯನ
ಮಡದಿಯರು +ಹೊಂಗಳಸ +ಜಲವನು
ಪಡಿಗವನು+ ಹಿಡಿದ್+ಅಸುರರಿಪುವಿನ +ಬರವ+ ಹಾರಿದರು
ಅಚ್ಚರಿ:
(೧) ಮೇಲೆ ಪದದ ಬಳಕೆ – ಮೇಲ್ವಾಸಡಕಿಲನು, ಮೇಲುಕಟ್ಟುಗಳು, ಮೇಲಡರಿದವು – ೧-೩ ಸಾಲಿನ ಕೊನೆಯ ಪದ ಮೇ ಇಂದು ಪ್ರಾರಂಭ