ಕೇಳು ಜನಮೇಜಯ ಧರಿತ್ರೀ
ಪಾಲ ಮುರಹರ ಗುರು ನದೀಜರ
ಬೀಳುಕೊಟ್ಟನು ಕೃಪನ ಮನ್ನಿಸಿ ಮನೆಗೆ ಕಳುಹಿದನು
ಆಲಯಕೆ ವಿದುರಂಗೆ ಕೊಟ್ಟನು
ವೀಳಯವನೊಡನೆಯ್ದಿ ಬಂದ
ನೃಪಾಲಕರ ಮೊಗಸನ್ನೆಯಲಿ ಕಳುಹಿದನು ಮನೆಗಳಿಗೆ (ಉದ್ಯೋಗ ಪರ್ವ, ೮ ಸಂಧಿ, ೧ ಪದ್ಯ)
ತಾತ್ಪರ್ಯ:
ವೈಶಂಪಾಯನರು ಜನಮೇಜಯ ರಾಜನಿಗೆ ಮಹಾಭಾರತದ ಕಥೆಯನ್ನು ಮುಂದುವರಿಸುತ್ತಾ, ಕೃಷ್ಣನು ಧೃತರಾಷ್ಟ್ರನನ್ನು ಬೀಳ್ಕೊಟ್ಟಮೇಲೆ ಅವರ ಜೊತೆಯಿದ್ದ ದ್ರೋಣ ಮತ್ತು ಭೀಷ್ಮರನ್ನು ಕಳುಹಿಸಿದನು, ಕೃಪಚಾರ್ಯರನ್ನು ಮನ್ನಿಸಿ ಅವರನ್ನು ಕಳುಹಿಸಿ, ವಿದುರನಿಗೆ ಅವನ ಮನೆಗೆ ಹೋಗಲು ವೀಳಯವನ್ನು ನೀಡಿ ಉಳಿದೆಲ್ಲ ರಾಜರನ್ನು ಮುಖಸನ್ನೆಯಲ್ಲೆ ಅವರ ಮನೆಗೆ ಹೋಗಲು ಅಪ್ಪಣೆನೀಡಿದನು.
ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಮುರಹರ: ಕೃಷ್ಣ; ಗುರು: ಆಚಾರ್ಯ (ದ್ರೋಣ), ನದೀಜ: ಗಂಗೆಯಲ್ಲಿ ಹುಟ್ಟಿದ (ಭೀಷ್ಮ); ಬೀಳುಕೊಟ್ಟನು: ಕಳುಹಿಸಿದನು; ಮನ್ನಿಸು: ಅನುಗ್ರಹಿಸು; ಮನೆ: ಆಲಯ; ವೀಳಯ: ತಾಂಬೂಲ; ಐದು: ಹೋಗಿಸೇರು; ನೃಪಾಲ: ರಾಜ; ಮೊಗ: ಮುಖ; ಸನ್ನೆ: ಸಂಕೇತ, ಸುಳಿವು;
ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಮುರಹರ +ಗುರು +ನದೀಜರ
ಬೀಳುಕೊಟ್ಟನು +ಕೃಪನ +ಮನ್ನಿಸಿ +ಮನೆಗೆ +ಕಳುಹಿದನು
ಆಲಯಕೆ+ ವಿದುರಂಗೆ +ಕೊಟ್ಟನು
ವೀಳಯವನ್+ಒಡನೆಯ್ದಿ+ ಬಂದ
ನೃಪಾಲಕರ+ ಮೊಗಸನ್ನೆಯಲಿ+ ಕಳುಹಿದನು +ಮನೆಗಳಿಗೆ
ಅಚ್ಚರಿ:
(೧) ಕೇಳು, ಬೀಳು – ಪ್ರಾಸ ಪದ
(೨) ಆಲಯ, ಮನೆ; ಬೀಳುಕೊಟ್ಟನು, ಕಳುಹಿದನು – ಸಮನಾರ್ಥಕ ಪದ