ಪದ್ಯ ೨೪: ದ್ರೌಪದಿಯು ನೀವು ರಾಜರಾಗಿರೆಂದು ಏಕೆ ಹಂಗಿಸಿದಳು?

ಸೋಲ ಗೆಲ್ಲವದೇಕೆ ಕುರುವಂ
ಶಾಳಿಯೊಳು ಸೋದರರು ನೀವ್ ಪಾಂ
ಚಾಲರಾವೇ ಹೊರಗು ನಿಮ್ಮೊಳು ಸಲುಗೆ ನಮಗೇಕೆ
ಮೇಳವೇ ಸಿರಿಗಳಿಸಲರಿದು ಜ
ನಾಳಿ ಹೆಂಡಿರಪೂರ್ವವೇ ಕ್ಷಿತಿ
ಪಾಲಕರು ನೀವಾಗಲೆಮಗದು ಪರಮ ಪರಿಣಾಮ (ಉದ್ಯೋಗ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾಂಡವರು ಮತ್ತು ಕೌರವರಲ್ಲಿ ಯಾರೇ ಗೆದ್ದರೂ ಅಥವ ಸೋತರೂ ಏನು ವ್ಯತ್ಯಾಸವಿಲ್ಲ, ಏಕೆಂದರೆ ನೀವಿಬ್ಬರು ಕುರುವಂಶದ ಸೋದರರು, ಆದರೆ ನಾನು ಪಾಂಚಾಲಿ, ಹೊರಗಿನವಳು. ನಿಮ್ಮಲ್ಲಿ ನಮಗೆ ಸದರ ಬೇಡ. ಸಂಪತ್ತನ್ನು ಗಳಿಸುವುದು ಮಹಾಕಷ್ಟ. ಸಂಧಾನ ಮಾಡಿಕೊಂಡು ರಾಜರಾಗುವುದರಿಂದ ಐಶ್ವರ್ಯವು ಸುಲಭವಾಗಿ ಸಿಗುತ್ತದೆ. ರಾಜರೆಂದ ಮೇಲೆ ಜನರ ಬೆಂಬಲವೂ ಬರುತ್ತದೆ ಆದರೆ ಅದು ಹೆಂಡತಿಯರಿಗೆ ಬರುವುದಿಲ್ಲ. ನೀವು ರಾಜರಾಗುವುದು ನಮಗೆ ಬಹಳ ಸಂತೋಷ ಎಂದು ದ್ರೌಪದಿಯು ಹಂಗಿಸಿದಳು.

ಅರ್ಥ:
ಸೋಲು: ಪರಾಭವ; ಗೆಲ್ಲು: ಗೆಲುವು, ಜಯ; ವಂಶ: ಕುಲ; ಆಳಿ: ಸಾಲು; ಸೋದರ: ಅಣ್ಣ ತಮ್ಮಂದಿರು; ಹೊರಗೆ: ಆಚೆ, ಬಹಿರಂಗ; ಸಲುಗೆ: ಸದರ; ಮೇಳ: ಸೇರುವಿಕೆ; ಸಿರಿ: ಐಶ್ವರ್ಯ; ಅರಿ: ತಿಳಿ; ಜನಾಳಿ: ಜನರ ಗುಂಪು/ಬೆಂಬಲ; ಹೆಂಡಿರ: ಹೆಂಡತಿ, ಗರತಿ; ಪೂರ್ವ: ಹಿಂದೆ; ಕ್ಷಿತಿ: ಭೂಮಿ; ಪಾಲಕ: ನೋಡಿಕೊಳ್ಳುವವ; ಪರಮ: ಶ್ರೇಷ್ಠ; ಪರಿಣಾಮ: ಒಳಿತು, ಕ್ಷೇಮ, ಫಲಿತಾಂಶ;

ಪದವಿಂಗಡಣೆ:
ಸೋಲ +ಗೆಲ್ಲವದ್+ಏಕೆ +ಕುರುವಂ
ಶಾಳಿಯೊಳು +ಸೋದರರು +ನೀವ್ +ಪಾಂ
ಚಾಲರಾವೇ+ ಹೊರಗು +ನಿಮ್ಮೊಳು +ಸಲುಗೆ +ನಮಗೇಕೆ
ಮೇಳವೇ +ಸಿರಿಗಳಿಸಲ್+ಅರಿದು +ಜ
ನಾಳಿ +ಹೆಂಡಿರ+ಪೂರ್ವವೇ +ಕ್ಷಿತಿ
ಪಾಲಕರು+ ನೀವಾಗಲ್+ಎಮಗದು +ಪರಮ +ಪರಿಣಾಮ

ಅಚ್ಚರಿ:
(೧) ಹೆಣ್ಣು ಯಾವ ರೀತಿ ತನ್ನ ಅಭಿಪ್ರಾಯವನ್ನು ತಿಳಿಸಬಹುದೆಂದು ತೋರುವ ಪದ್ಯ
(೨) ವಂಶಾಳಿ, ಜನಾಳಿ – ಪ್ರಾಸ ಪದ

ನಿಮ್ಮ ಟಿಪ್ಪಣಿ ಬರೆಯಿರಿ