ಬಲಿಯ ರಾಜ್ಯ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲಹು ಹನುಮಾನುವಿನ ಭುಜಬಲ ವೀರರಾಘವನ
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೭೯ ಪದ್ಯ)
ತಾತ್ಪರ್ಯ:
ಉತ್ತಮರಾಗಲು ಯಾವ ಗುಣವನ್ನು ಅನುಸರಿಸಬೇಕೆಂದು ಇಲ್ಲಿ ಹೇಳಲಾಗಿದೆ. ಬಲಿ ಚಕ್ರವರ್ತಿಯ ರಾಜ್ಯ, ವಿಭೀಷಣನ ಐಶ್ವರ್ಯ, ಸಮುದ್ರದ ಗಾಂಭೀರ್ಯ, ಬಾಣನ ಶೌರ್ಯ, ಹನುಮಂತನ ಬಾಹುಬಲ, ರಾಮನ ಛಲ, ದಧೀಚಿಯ ದಾನದ ಗುಣ, ಪಾರ್ಥನ ಸ್ನೇಹದ ಗುಣ, ಯುಧಿಷ್ಠಿರನ ಸಹನೆ ಈ ಗುಣಗಳನ್ನು ಹೊಂದಿಸಿಕೊಳ್ಳುವವನೇ ಉತ್ತಮ ಖ್ಯಾತಿಯನ್ನು ಹೊಂದುತ್ತಾನೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.
ಅರ್ಥ:
ಬಲಿ: ಚಕ್ರವರ್ತಿಯ ಹೆಸರು; ರಾಜ್ಯ: ರಾಷ್ಟ್ರ, ದೇಶ; ಸಿರಿ: ಸಂಪತ್ತು, ಐಶ್ವರ್ಯ; ಜಲನಿಧಿ: ಸಮುದ್ರ; ಗಾಂಭೀರ್ಯ: ಆಳ, ಘನತೆ; ಬಾಣ: ಬಲೀಂದ್ರನ ಮಗ; ಬಲುಹು: ಬಲ, ಶಕ್ತಿ; ಭುಜಬಲ: ತೋಳ್ಬಲ, ಶಕ್ತಿ; ವೀರ: ಕಲಿ, ಶೂರ; ರಾಘವ: ರಾಮ; ಛಲ: ದೃಢ ನಿಶ್ಚಯ; ದಾನ: ನೀಡು; ಕೆಳೆ: ಸ್ನೇಹ, ಗೆಳೆತನ; ನೃಪ: ರಾಜ; ಸೈರಣೆ: ತಾಳ್ಮೆ, ಸಹನೆ; ಅಳವಡು: ಹೊಂದು, ಸೇರು, ಕೂಡು; ಬದುಕು: ಜೀವಿಸು; ವಿಖ್ಯಾತಿ: ಪ್ರಸಿದ್ಧ; ಕೇಳು: ಆಲಿಸು;
ಪದವಿಂಗಡಣೆ:
ಬಲಿಯ +ರಾಜ್ಯ +ವಿಭೀಷಣನ +ಸಿರಿ
ಜಲನಿಧಿಯ +ಗಾಂಭೀರ್ಯ +ಬಾಣನ
ಬಲಹು +ಹನುಮಾನುವಿನ+ ಭುಜಬಲ+ ವೀರ+ರಾಘವನ
ಛಲ +ದಧೀಚಿಯ +ದಾನ +ಪಾರ್ಥನ
ಕೆಳೆ+ ಯುಧಿಷ್ಠಿರ +ನೃಪನ +ಸೈರಣೆಗ್
ಅಳವಡುವ +ಬದುಕುಳ್ಳಡ್+ಅದು +ವಿಖ್ಯಾತಿ +ಕೇಳೆಂದ
ಅಚ್ಚರಿ:
(೧) ಬಲಿ, ವಿಭೀಷಣ, ಜಲನಿಧಿ, ಬಾಣ, ಹನುಮಂತ, ರಾಮ, ದಧೀಚಿ, ಪಾರ್ಥ, ಯುಧಿಷ್ಠಿರ – ೯ ಗುಣಗಳನ್ನು ಉಪಮಾನದ ಮೂಲಕ ತಿಳಿಸುವ ಪದ್ಯ