ಧರಣಿಯಮರರ ಸೇವೆಯನು ವಿ
ಸ್ತರಿಸಿ ಸತ್ಕಾರದಲವರನಾ
ದರಿಸಿ ಬಹುಮಾನವನು ವಿರಚಿಸಿದಾ ಮಹಾತ್ಮರಿಗೆ
ಎರವಹುದೆ ಸ್ವರ್ಗಾಪವರ್ಗದ
ಸಿರಿಯದೆಂಬುದನರಿದು ನಡೆವಂ
ಗರಿದದಾವುದು ಭೂಪ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೬೮ ಪದ್ಯ)
ತಾತ್ಪರ್ಯ:
ಬ್ರಾಹ್ಮಣರ ಸೇವೆ ಸತ್ಕಾರಗಳನ್ನು ಮಾಡಿ ಹೆಚ್ಚಿನ ಉಡುಗೊರೆಗಳನ್ನು ಕೊಟ್ಟ ಮಹಾತ್ಮನಿಗೆ ಸ್ವರ್ಗ, ಮೋಕ್ಷಗಳ ಐಶ್ವರ್ಯವು ತಪ್ಪುವುದಿಲ್ಲ ಎನ್ನುವುದನ್ನು ತಿಳಿದು ನಡೆಯುವವನಿಗೆ ಅಸಾಧ್ಯವಾವುದಾದರೂ ಏನು ಎಂದು ಸನತ್ಸುಜಾತರು ತಿಳಿಸಿದರು.
ಅರ್ಥ:
ಧರಣಿ: ಭೂಮಿ; ಅಮರ: ದೇವತೆ; ಧರಣಿಯಮರರು: ಬ್ರಾಹ್ಮಣ; ಸೇವೆ: ಶುಶ್ರೂಷೆ; ವಿಸ್ತರ:ಹಬ್ಬುಗೆ, ವಿಸ್ತಾರ; ಸತ್ಕಾರ: ಗೌರವ; ಆದರಿಸು: ಪ್ರೀತಿ, ಉಪಕಾರ, ಸತ್ಕಾರ; ಬಹುಮಾನ: ಉಡುಗೊರೆ; ವಿರಚಿಸು: ನಿರ್ಮಿಸು; ಮಹಾತ್ಮ: ಶ್ರೇಷ್ಠ; ಎರವು: ಅಭಾವ, ದೋಷ; ಸ್ವರ್ಗ: ನಾಕ; ಅಪವರ್ಗ: ಮೋಕ್ಷ; ಸಿರಿ: ಐಶ್ವರ್ಯ; ಅರಿ: ತಿಳಿ; ನಡೆ: ಹೆಜ್ಜೆ ಹಾಕು; ಭೂಪ: ರಾಜ; ಚಿತ್ತೈಸು: ಗಮನಿಸು; ಮುನಿ: ಋಷಿ;
ಪದವಿಂಗಡಣೆ:
ಧರಣಿ+ಯಮರರ +ಸೇವೆಯನು +ವಿ
ಸ್ತರಿಸಿ +ಸತ್ಕಾರದಲ್+ಅವರನ್+
ಆದರಿಸಿ +ಬಹುಮಾನವನು +ವಿರಚಿಸಿದ+ಆ +ಮಹಾತ್ಮರಿಗೆ
ಎರವಹುದೆ+ ಸ್ವರ್ಗ+ ಅಪವರ್ಗದ
ಸಿರಿಯದ್+ಎಂಬುದನ್+ಅರಿದು +ನಡೆವಂಗ್
ಅರಿದದ್+ಆವುದು +ಭೂಪ +ಚಿತ್ತೈಸೆಂದನಾ +ಮುನಿಪ
ಅಚ್ಚರಿ:
(೧) ಸ್ವರ್ಗಾಪವರ್ಗ – ಪದದ ಬಳಕೆ