ಜಾತಿಧರ್ಮವನನುಸರಿಸಿ ವರ
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತೆ ಪರಗುಣಸ್ತುತಿ ನಿಂದೆಗಳನುಳಿದು
ಭೂತನಾಥನ ಭುಕುತಿಯಲಿ ವಿ
ಖ್ಯಾತವಹ ಗುರುದೈವದಲಿ ಭಯ
ಭೀತಿ ಯಿಂದಿರಲದುವೆ ಕೇಳ್ ಸುಕೃತಕ್ಕೆ ಕಡೆಯೆಂದ (ಉದ್ಯೋಗ ಪರ್ವ, ೪ ಸಂಧಿ, ೫೪ ಪದ್ಯ)
ತಾತ್ಪರ್ಯ:
ತನ್ನ ಕುಲ, ಜಾತಿ ಧರ್ಮವನ್ನನುಸರಿಸುತ್ತ, ತಂದೆ ತಾಯಿಗಳ ಶುಶ್ರೂಷೆ ಮಾಡುತ್ತಾ, ಪರರ ಗುಣದ ಹೊಗಳಿಕೆ ತೆಗಳಿಕೆಗಳನ್ನು ಬಿಟ್ಟು, ಶಿವನಲ್ಲಿ ಗುರು ದೈವದಲ್ಲಿ ಭಯಭಕ್ತಿಯಿಂದಿರುವುದೇ ಅತಿ ಹೆಚ್ಚಿನ ಪುಣ್ಯವನ್ನುಂಟು ಮಾಡುತ್ತದೆ ಎಂದು ಸನತ್ಸುಜಾತರು ತಿಳಿಸಿದರು.
ಅರ್ಥ:
ಜಾತಿ: ಕುಲ; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ವರ: ಶ್ರೇಷ್ಠ; ಮಾತೃ: ಮಾತೆ; ಪಿತೃ: ಪಿತ; ಪರಿಚರ್ಯೆ: ಸೇವೆ, ಶುಶ್ರೂಷೆ; ಸಂಪ್ರೀತಿ: ಅತಿಶಯವಾದ ಪ್ರೀತಿ, ಒಲವು; ಪರ: ಬೇರೆ; ಗುಣ: ನಡತೆ; ಸ್ತುತಿ: ಹೊಗಳಿಕೆ; ನಿಂದೆ: ತೆಗಳಿಕೆ; ಉಳಿದು: ಮಿಕ್ಕ; ಭೂತನಾಥ: ಶಿವ, ದೇವರು; ಭುಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಭೀತಿ: ಭಯ; ಸುಕೃತ: ಒಳ್ಳೆಯ ಕೆಲಸ; ಕಡೆ: ದಾರಿ;
ಪದವಿಂಗಡಣೆ:
ಜಾತಿ+ಧರ್ಮವನ್+ಅನುಸರಿಸಿ +ವರ
ಮಾತೃ+ಪಿತೃ +ಪರಿಚರಿಯದಲಿ +ಸಂ
ಪ್ರೀತಿವಡೆಯುತೆ +ಪರಗುಣ+ಸ್ತುತಿ +ನಿಂದೆಗಳನ್+ಉಳಿದು
ಭೂತನಾಥನ +ಭುಕುತಿಯಲಿ +ವಿ
ಖ್ಯಾತವಹ +ಗುರುದೈವದಲಿ +ಭಯ
ಭೀತಿ +ಯಿಂದಿರಲ್+ಅದುವೆ +ಕೇಳ್ +ಸುಕೃತಕ್ಕೆ +ಕಡೆಯೆಂದ
ಅಚ್ಚರಿ:
(೧) ಸ್ತುತಿ, ನಿಂದೆ – ವಿರುದ್ಧ ಪದ
(೨) ಮಾತೃ ಪಿತೃ; ಭಯ ಭಕ್ತಿ – ಜೋಡಿ ಪದಗಳ ಬಳಕೆ