ತಾನಿದಿರು ಹಗೆ ಕೆಳೆ ವಿವೇಕ
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ತದಲಿ
ದಾನ ಧರ್ಮ ಪರೋಪಕಾರ ವಿ
ಧಾನ ದೀಕ್ಷಾಕರ್ಮನಿಷ್ಠರು
ಮಾನನೀಯರಲೇ ಮಹೀಪತಿ ಕೇಳು ನೀನೆಂದ (ಉದ್ಯೋಗ ಪರ್ವ, ೪ ಸಂಧಿ, ೨೯ ಪದ್ಯ)
ತಾತ್ಪರ್ಯ:
ಜೀವಿತಾವದಿಯಲ್ಲಿ ನಾನು, ಇನ್ನೊಬ್ಬರು, ಶತ್ರು, ಮಿತ್ರ, ವಿವೇಕ, ಜ್ಞಾನ, ಅಜ್ಞಾನ, ಇಹ ಪರಲೋಕಗಳ ಹಾನಿ, ವೃದ್ಧಿ ಇವುಗಳಲ್ಲಿ ಒಂದೇ ಮನಸ್ಸಿನಿಂದ ದಾನ, ಧರ್ಮ, ಪರೋಪಕಾರ, ಸತ್ಕರ್ಮ, ದೀಕ್ಷೆ ನಿಷ್ಠೆಯಿಂದಿರುವವರು ಮನ್ನಣೆಗೆ ಪಾತ್ರರಾಗುತ್ತಾರೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ಹೇಳಿದರು.
ಅರ್ಥ:
ತಾನು: ನಾನು; ಇದಿರು: ಎದುರು; ಹಗೆ: ದ್ವೇಷ; ಕೆಳೆ:ಸ್ನೇಹ, ಗೆಳೆತನ, ಮೈತ್ರಿ; ವಿವೇಕ: ಯುಕ್ತಾಯುಕ್ತ ವಿಚಾರ; ಜ್ಞಾನ: ತಿಳಿವಳಿಕೆ, ಅರಿವು; ಅಜ್ಞಾನ: ಅರಿವಿಲ್ಲದಿರುವಿಕೆ, ಅವಿದ್ಯೆ; ಇಹಪರ: ಈ ಲೋಕ ಮತ್ತು ಪರಲೋಕ; ಹಾನಿ: ನಷ್ಟ; ವೃದ್ಧಿ: ಹೆಚ್ಚಳ, ಅಭ್ಯುದಯ; ಮಾರ್ಗ: ದಾರಿ; ಚಿತ್ತ:ಮನಸ್ಸು; ಏಕಚಿತ್ತ: ಒಂದರೆಡೆಗೆ ಮನಸ್ಸನ್ನು ಕೇಂದ್ರೀಕರಿಸುವುದು; ದಾನ: ನೀಡುವಿಕೆ; ಧರ್ಮ: ಸನ್ನಡತೆ; ಪರೋಪಕಾರ: ಇತರರಿಗೆ ಸಹಾಯ; ವಿಧಾನ: ರೀತಿ; ದೀಕ್ಷೆ: ವ್ರತ, ನಿಯಮ; ಕರ್ಮ: ಕಾರ್ಯ; ನಿಷ್ಠ: ಶ್ರದ್ಧೆಯುಳ್ಳವನು; ಮಾನನೀಯರು: ಗೌರವಾನ್ವಿತರು; ಮಹೀಪತಿ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ತಾನ್+ಇದಿರು +ಹಗೆ +ಕೆಳೆ+ ವಿವೇಕ
ಜ್ಞಾನವ್+ಅಜ್ಞಾನಂಗಳ್+ಇಹಪರ
ಹಾನಿ +ವೃದ್ಧಿಯ +ಮಾರ್ಗದಲಿ +ತಾನೇಕ +ಚಿತ್ತದಲಿ
ದಾನ +ಧರ್ಮ +ಪರೋಪಕಾರ+ ವಿ
ಧಾನ +ದೀಕ್ಷಾ+ಕರ್ಮ+ನಿಷ್ಠರು
ಮಾನನೀಯರಲೇ +ಮಹೀಪತಿ +ಕೇಳು +ನೀನೆಂದ
ಅಚ್ಚರಿ:
(೧) ತಾನು, ಇದಿರು; ಹಗೆ,ಕಳೆ; ಜ್ಞಾನ, ಅಜ್ಞಾನ; ಇಹ, ಪರ; ಹಾನಿ, ವೃದ್ಧಿ – ವಿರುದ್ಧ ಪದಗಳ ಬಳಕೆ
(೨) ದಾನ, ಧರ್ಮ, ಪರೋಪಕಾರ – ಮೂರರಲ್ಲಿ ನಿಷ್ಠೆ ಹೊಂದಿರುವವರು ಮಾನನೀಯರು