ಪದ್ಯ ೬: ಉತ್ತರನ ಬಳಿ ಬಂದ ಗೋಪಾಲಕನು ಏನು ನಿವೇದಿಸಿದನು?

ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ
ಆಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪ ವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ (ವಿರಾಟ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಗೋಪಾಲಕನು ಉತ್ತರನ ಆಸ್ಥಾನಕ್ಕೆ ಬಂದ. ಮುಖದಲ್ಲಿ ಭಯವು ಆವರಿಸಿದೆ. ಆ ಭೀತಿಯ ತಾಪದಿಂದ ಎದೆ ಹೊಡೆದುಕೊಳ್ಳುತ್ತ್ದಿದೆ; ತುದಿನಾಲಗೆಯಲ್ಲಿ ತೊದಲು ಮಾತು ಬರುತ್ತಿವೆ. ಅಂಗಳು ಒಣಗಿದೆ; ಭಯದಿಂದ ಉತ್ತರನ ಮುಂದೆ ಗೋಪಾಲಕನು ಮೊರೆಯಿಡುತ್ತಿದ್ದಾನೆ.

ಅರ್ಥ:
ಬೆಗಡು:ಭಯ, ಅಂಜಿಕೆ; ಮುಸುಕು: ಆವರಿಸು; ಮುಖ: ಆನನ; ಭೀತಿ: ಭಯ; ಢಗೆ: ಕಾವು, ದಗೆ; ಹೊಯ್ಲು: ಏಟು, ಹೊಡೆತ; ಹೃದಯ: ಎದೆ, ವಕ್ಷ; ತುದಿ: ಅಗ್ರ;ನಾಲಗೆ: ಜಿಹ್ವೆ; ತೊದಳು: ಸ್ವಷ್ಟವಾಗಿ ಮಾತಾಡದಿರುವುದು; ನುಡಿ: ಮಾತು; ಬೆರಗು: ಆಶ್ಚರ್ಯ; ಬರ: ಕ್ಷಾಮ; ಹುಯ್ಯಲು: ಪೆಟ್ಟು, ಹೊಡೆತ; ಬಹಳ: ತುಂಬ; ಓಲಗ: ದರ್ಬಾರು; ಬಂದನು: ಆಗಮಿಸಿದನು; ನೃಪ: ರಾಜ; ಮಗ: ಸುತ; ಕಾಲು: ಪಾದ; ಎರಗು: ನಮಸ್ಕರಿಸು; ದೂರು: ಮೊರೆ, ಅಹವಾಲು; ಕಳವಳ: ಚಿಂತೆ, ಗೊಂದಲ; ತಾಳಿಗೆ: ಗಂಟಲು;

ಪದವಿಂಗಡಣೆ:
ಬೆಗಡು+ ಮುಸುಕಿದ +ಮುಖದ +ಭೀತಿಯ
ಢಗೆಯ +ಹೊಯ್ಲಿನ +ಹೃದಯ +ತುದಿ+ನಾ
ಲಗೆಯ +ತೊದಳಿನ+ ನುಡಿಯ +ಬೆರಗಿನ +ಬರತ +ತಾಳಿಗೆಯ
ಆಗಿವ +ಹುಯ್ಯಲುಗಾರ+ ಬಹಳ
ಓಲಗಕೆ +ಬಂದನು +ನೃಪ +ವಿರಾಟನ
ಮಗನ +ಕಾಲಿಂಗ್+ಎರಗಿದನು +ದೂರಿದನು +ಕಳಕಳವ

ಅಚ್ಚರಿ:
(೧) ಬೆಗಡು, ಭೀತಿ – ಸಮನಾರ್ಥಕ ಪದ
(೨) ಹೆದರಿದ ಮನುಷ್ಯನ ಸ್ಥಿತಿಯನ್ನು ವರ್ಣಿಸುವ ಪದ್ಯ –
ಬೆಗಡು ಮುಸುಕಿದ ಮುಖ; ಭೀತಿಯ ಢಗೆಯ ಹೊಯ್ಲಿನ ಹೃದಯ; ತುದಿನಾಲಿಗೆಯ ತೊದಳಿನ ನುಡಿ; ಬೆರಗಿನ ಬರತ ತಾಳಿಗೆಯ

ನಿಮ್ಮ ಟಿಪ್ಪಣಿ ಬರೆಯಿರಿ