ಹೆಮ್ಮರವನಿದ ಕಿತ್ತು ವೈರಿಸು
ಶರ್ಮಕನನೊರಸುವೆನು ಬವರವ
ನೆಮ್ಮಿದರೆ ಮೋಹರವನರಿವೆನು ಜೀಯ ಚಿತ್ತೈಸು
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು (ವಿರಾಟ ಪರ್ವ, ೫ ಸಂಧಿ, ೬೦ ಪದ್ಯ)
ತಾತ್ಪರ್ಯ:
ಭೀಮನು ಆಲದ ಮರವನ್ನು ನೋಡಿ, ಅಣ್ಣ ಈ ಮರವನ್ನು ಕಿತ್ತು ಸುಧರ್ಮನನ್ನು ನಾಶಮಾಡುತ್ತೇನೆ, ಶತ್ರು ಸೈನ್ಯಕ್ಕೆ ಏನು ಮಾಡಬೇಕೆಂಬುದು ನಾನು ತಿಳಿದಿರುವೆ, ಎನ್ನಲು, ಯುಧಿಷ್ಠಿರನು, ಭೀಮ ಸಮಾಧಾನಿಯಾಗು, ಮರವನ್ನು ಮುರಿಯಬೇಡ, ನಮಗೆ ಕೆಟ್ಟ ಹೆಸರು ಬಂದೀತು, ಎಂದನು.
ಅರ್ಥ:
ಹೆಮ್ಮರ: ದೊಡ್ಡದಾದ ವೃಕ್ಷ; ಕಿತ್ತು: ಹೊರೆಗೆಳೆದು; ವೈರಿ: ಶತ್ರು; ಒರಸು: ನಾಶಮಾಡು; ಬವರ:ಕಾಳಗ, ಯುದ್ಧ; ಮೋಹರ: ಸೈನ್ಯ, ದಂಡು, ಯುದ್ಧ; ಅರಿ: ತಿಳಿ; ಜೀಯ: ಒಡೆಯ; ಚಿತ್ತೈಸು: ಲಕ್ಷಿಸು, ಗಮನಿಸು; ಸೈರಿಸು: ಸಮಾಧಾನ; ಮರ: ವೃಕ್ಷ; ಮುರಿ: ಸೀಳು; ಮಾತು: ವಾಣಿ; ಕೇಳು: ಆಲಿಸು; ಹೊಲ್ಲೆಹ:ದೋಷ; ತಾಗು: ಅಂಟಿಸು; ಮಾಣ: ಮಾಡಬೇಡ; ನೆಮ್ಮು: ನಂಬು;
ಪದವಿಂಗಡಣೆ:
ಹೆಮ್ಮರವನ್+ಇದ+ ಕಿತ್ತು+ ವೈರಿ+ಸು
ಶರ್ಮಕನನ್+ಒರಸುವೆನು +ಬವರವ
ನೆಮ್ಮಿದರೆ +ಮೋಹರವನ್+ಅರಿವೆನು +ಜೀಯ +ಚಿತ್ತೈಸು
ತಮ್ಮ +ಸೈರಿಸು +ಮರನ +ಮುರಿಯದಿರ್
ಎಮ್ಮ +ಮಾತನು +ಕೇಳು +ಹೊಲ್ಲೆಹವ್
ಎಮ್ಮ +ತಾಗದೆ+ ಮಾಣದ್+ಎಂದನು+ ಧರ್ಮನಂದನನು
ಅಚ್ಚರಿ:
(೧) ಬವರ, ಮೋಹರ – ಸಮನಾರ್ಥಕ ಪದ
(೨) ವೈರಿಸು, ಚಿತ್ತೈಸು – ಪ್ರಾಸ ಪದ