ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತರನು ಕಳುಹೆ
ಹುರಿಯೊಡೆದು ಹದಿನಾರು ಸಾವಿರ
ವರಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ದಾಳಿಯಿಟ್ಟನು ತೆಂಕದೆಸೆಗಾಗಿ (ವಿರಾಟ ಪರ್ವ, ೫ ಸಂಧಿ, ೪೦ ಪದ್ಯ)
ತಾತ್ಪರ್ಯ:
ದುರ್ಯೋಧನನು ಒಂದು ತಂತ್ರವನ್ನು ಮಾಡಿದನು. ಸೈನ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಿದನು. ತ್ರಿಗರ್ತರಿನ್ನು ದಕ್ಷಿಣದಿಕ್ಕಿನಿಂದ ಗೋಗ್ರಹಣ ಮಾಡಲು ಹೇಳಿ,ತಾನೆ ಒಂದು ಸೈನ್ಯದ ಭಾಗವನ್ನು ಉತ್ತರದ ದಿಕ್ಕಿನತ್ತ ಮುನ್ನುಗ್ಗಿಸಲು ಮುಂದಾದನು. ತ್ರಿಗರ್ತರ ಮುಖ್ಯಸ್ಥನಾದ ಸುಧರ್ಮನು ಹದಿನಾರು ಸಾವಿರ ಜನ ಮಹಾರಥರೊಡನೆ ದಕ್ಷಿಣ ದಿಕ್ಕಿನಲ್ಲಿ ದಾಳಿಯಿಟ್ಟನು.
ಅರ್ಥ:
ಎರಡು: ದ್ವಿ, ದ್ವಂದ್ವ; ಮೋಹರ: ಸೈನ್ಯ, ದಂಡು; ತೆಂಕಣ:ದಕ್ಷಿಣ ದಿಕ್ಕು; ಹರಿದು: ದಾಳಿ ಮಾಡು; ತುರುಗಲ: ಸಮೂಹ; ತಡೆ: ನಿಲ್ಲು; ಉತ್ತರ: ಮೇಲಿನ; ನೃಪ: ರಾಜ; ಕಳುಹು: ಕಳುಹಿಸು, ಆಜ್ಞಾಪಿಸು; ಹುರಿ:ಕೆಚ್ಚು, ಬಲ; ಸಾವಿರ: ಸಹಸ್ರ; ವರ: ಶ್ರೇಷ್ಠ; ಮಹಾರಥ: ಬಲಶಾಲಿ, ಕಲಿ; ದಾಳಿ: ಯುದ್ಧ; ದೆಸೆ: ದಿಕ್ಕು;ದುರ್ಧರ: ತಾಳಲು ಅಸಾಧ್ಯವಾದ
ಪದವಿಂಗಡಣೆ:
ಎರಡು+ ಮೋಹರವಾಗಿ +ತೆಂಕಲು
ಹರಿದು +ತುರುಗಳ+ ತಡೆಯಿ+ ನಾವ್
ಉತ್ತರದಲ್+ಆನುವೆವ್+ಎನುತ +ನೃಪತಿ +ತ್ರಿಗರ್ತರನು+ ಕಳುಹೆ
ಹುರಿಯೊಡೆದು+ ಹದಿನಾರು+ ಸಾವಿರ
ವರಮಹಾರಥರ್+ಒಗ್ಗಿನಲಿ +ದು
ರ್ಧರ +ಸುಶರ್ಮನು +ದಾಳಿಯಿಟ್ಟನು +ತೆಂಕ+ದೆಸೆಗಾಗಿ
ಅಚ್ಚರಿ:
(೧) ತೆಂಕ – ೧, ೬ ಸಾಲಿನ ಕೊನೆಯ ಪದ