ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ (ವಿರಾಟ ಪರ್ವ, ೫ ಸಂಧಿ, ೩೩ ಪದ್ಯ)
ತಾತ್ಪರ್ಯ:
ದುರ್ಯೋಧನನು ತನ್ನ ಅಲಂಕಾರಮಾಡಿದ ರಥದ ಮಧ್ಯದಲ್ಲಿ ಆಸೀನನಾದನು. ಅವನಿಗೆ ಆರತಿ, ಉಪ್ಪಾರತಿಗಳನ್ನು ಬೆಳಗಿದರು. ಘಟ್ಟರು ಅವನ ಬಿರುದುಗಳನ್ನು ಘೋಷಿಸುತ್ತಿರಲು, ನಗಾರಿ, ಕಹಳೆಗಳ ಸದು ಜಯಕಾರಗಳ ನಡುವೆ ಕೌರವನು ಹೊರಟನು.
ಅರ್ಥ:
ಆರತಿ:ನೀರಾಜನ; ಎತ್ತು: ಬೆಳಗು; ಉಪ್ಪಾರತಿ: ಉಪ್ಪಿನ ಆರತಿ, ಉಪ್ಪನ್ನು ನೀವಾಳಿಸುವುದು; ಸೂಸು:ಎರಚು, ಚಲ್ಲು; ಘನ: ಶ್ರೇಷ್ಠ; ರಥ: ಬಂಡಿ; ತೋರಣ: ಬಾಗಿಲಿನ ಅಲಂಕಾರ; ಮಧ್ಯ: ನಡುಭಾಗ; ರಾಯ: ರಾಜ; ಕುಳ್ಳಿರು: ಆಸೀನನಾದ; ಸಾರು: ಹರಡು, ಹಬ್ಬು; ಭಟ್ಟ: ಸೇವಕ, ಸೈನಿಕ; ನಾಗಾರಿ: ಒಂದು ಬಗೆಯ ಚರ್ಮ ವಾದ್ಯ; ಬಿರುದು: ; ಆವಳಿ: ಸಾಲು; ಜಯರವ: ಜಯಘೋಷ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಸೂಳೈಸು: ಧ್ವನಿ ಮಾಡು; ಓರಣ: ಕ್ರಮ, ಸಾಲು;
ಪದವಿಂಗಡಣೆ:
ಆರತಿಗಳ್+ಎತ್ತಿದವು +ತಳಿದ್
ಉಪ್ಪಾರತಿಯ +ಸೂಸಿದರು +ಘನರಥದ್
ಓರಣದ +ಮಧ್ಯದಲಿ +ಕೌರವರಾಯ ಕುಳ್ಳಿರಲು
ಸಾರಿದರು+ ಭಟ್ಟರು +ಮಹಾನಾ
ಗಾರಿಗಳು +ಬಿರುದಾವಳಿಯ +ಕೈ
ವಾರಿಸುವ +ಜಯರವದೊಡನೆ +ನಿಸ್ಸಾಳ +ಸೂಳೈಸೆ
ಅಚ್ಚರಿ:
(೧) ಆರತಿ, ಉಪ್ಪಾರತಿ – ಪ್ರಾಸ ಪದಗಳು