ಅರಸ ಕೇಳೈ ಬಳಿಕ ಪೃಥ್ವೀ
ಶ್ವರರಿಗಭಿನವಗಜ ರಥಾವಳಿ
ತುರಗ ಶಸ್ತ್ರಾಸ್ತ್ರಗಳನೀವ ನಿಯೋಗ ಕರ್ಣನದು
ಕರೆಕರೆದು ಯೋಗ್ಯಾತಿಶಯವರಿ
ದಿರದೆ ಯೋಷಿಜ್ಜನಕೆ ಮದ್ರೇ
ಶ್ವರನು ಕೊಡುವವನಾದರಧಿಕೋತ್ಸವದ ಸಿರಿಮಿಗಿಲು (ಸಭಾ ಪರ್ವ, ೮ ಸಂಧಿ, ೨೦ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಬಂದ ಎಲ್ಲಾ ರಾಜರುಗಳಿಗೆ ಕುದುರೆ, ಆನೆ, ರಥ ಶಸ್ತ್ರಾಸ್ತ್ರಗಳನ್ನು ಕೊಡುವವನು ಕರ್ಣನು. ಯಾಗಕ್ಕೆ ಬಂದ ಎಲ್ಲಾ ಸ್ತ್ರೀಯರಿಗೆ ಯೋಗ್ಯತಾನುಸಾರವಾಗಿ ಸತ್ಕರಿಸುವವನು ಶಲ್ಯ.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಅಭಿನವ: ಹೊಸದಾದ; ಗಜ: ಆನೆ; ರಥ: ಬಂಡಿ; ಆವಳಿ: ಸಾಲು, ಗುಂಪು; ತುರಗ: ಕುದುರೆ; ಶಸ್ತ್ರಾಸ್ತ್ರ: ಆಯುಧ; ನಿಯೋಗ: ಸಮಿತಿ; ಕರೆ: ಬರೆಮಾಡು; ಯೋಗ್ಯ:ಅರ್ಹತೆ ; ಯೋಷಿಜನ: ಸ್ತ್ರೀ; ಆದರ: ಸತ್ಕಾರ; ಅಧಿಕ: ಹೆಚ್ಚು; ಉತ್ಸವ: ಹಬ್ಬ; ಸಿರಿ: ಐಶ್ವರ್ಯ; ಮಿಗಿಲು: ಹೆಚ್ಚು;
ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಪೃಥ್ವೀ
ಶ್ವರರಿಗ್+ಅಭಿನವ+ಗಜ +ರಥಾವಳಿ
ತುರಗ+ ಶಸ್ತ್ರಾಸ್ತ್ರಗಳನೀವ+ ನಿಯೋಗ +ಕರ್ಣನದು
ಕರೆಕರೆದು +ಯೋಗ್ಯ +ಅತಿಶಯವರ್
ಇದಿರದೆ +ಯೋಷಿಜ್ಜನಕೆ+ ಮದ್ರೇ
ಶ್ವರನು+ ಕೊಡುವವನ್+ಆದರ್+ಅಧಿಕ್+ಉತ್ಸವದ+ ಸಿರಿ+ಮಿಗಿಲು
ಅಚ್ಚರಿ:
(೧) ಅರಸ, ಪೃಥ್ವೀಶ್ವರ – ಸಮನಾರ್ಥಕ ಪದ
(೨) ಶ್ವರ – ೨, ೬ ಸಾಲಿನ ಮೊದಲ ಪದ