ನೆರೆದ ಭೂಸುರ ತತಿಯ ನೋಟಕೆ
ಕರೆಸಿ ಕುಳ್ಳಿರಿಸುವನು ಸಾತ್ಯಕಿ
ಭರದಿ ನೆಂಜಲ ತೆಗೆಸಿ ಸಾರಿಸುವುದು ವಿಕರ್ಣಂಗೆ
ಅರಸಕೇಳ್ಭೋಜನದ ಸಮನಂ
ತರದ ವೀಳೆಯಗಂಧಮಾಲ್ಯಾಂ
ಬರವನೀವಧಿಕಾರ ದುಶ್ಯಾಸನನ ವಶವಾಯ್ತು (ಸಭಾ ಪರ್ವ, ೮ ಸಂಧಿ, ೧೭ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಬ್ರಾಹ್ಮಣರನ್ನು ಕರೆದು ಯಜ್ಞವಾಟಿಕೆಯಲ್ಲಿ ಕುಳ್ಳಿರಿಸುವವನು ಸಾತ್ಯಕಿ, ಭೋಜನಾನಂತರ ಎಲೆಗಳನ್ನು ತೆಗೆಸಿ ಸಾರಿಸುವ ಕೆಲಸದ ವಿಚಾರಣೆ ವಿಕರ್ಣನಿಗೆ, ಭೋಜನಾನಂತರ ತಾಂಬೂಲ, ಗಂಧ, ಹೂವು, ವಸ್ತ್ರಗಳನ್ನು ಕೊಡುವ ಅಧಿಕಾರ ದುಶ್ಯಾಸನದ್ದು.
ಅರ್ಥ:
ನೆರೆದ: ಸೇರಿದ್ದ; ಭೂಸುರ: ಬ್ರಾಹ್ಮಣ; ತತಿ:ಸಮೂಹ; ನೋಟ: ನೋಡುವಿಕೆ; ಕರೆಸು: ಬರೆಮಾಡು; ಕುಳ್ಳಿರಿಸು: ಕೂರಿಸು, ಆಸನ; ಭರ: ಜೋರು; ಎಂಜಲು: ಊಟವಾದ ಎಲೆ; ತೆಗೆಸು: ಹೊರತರು; ಸಾರಿಸು: ಒರಿಸು, ಸ್ವಚ್ಛಮಾಡು; ಅರಸ: ರಾಜ; ಭೋಜನ: ಊಟ; ಸಮನಂತರ: ಆದಮೇಲೆ; ವೀಳೆ: ತಾಂಬೂಲ; ಗಂಧ: ಸುಗಂಧದ ದ್ರವ್ಯ; ಮಾಲ: ಹೂವಿನ ಮಾಲೆ; ಅಂಬರ: ವಸ್ತ್ರ; ಅಧಿಕಾರ: ಕಾರ್ಯನಿರ್ವಾಹಕ ಸ್ಥಾನ; ವಶ: ಒಳಪಟ್ಟ;
ಪದವಿಂಗಡಣೆ:
ನೆರೆದ +ಭೂಸುರ +ತತಿಯ +ನೋಟಕೆ
ಕರೆಸಿ+ ಕುಳ್ಳಿರಿಸುವನು +ಸಾತ್ಯಕಿ
ಭರದಿನ್+ ಎಂಜಲ +ತೆಗೆಸಿ+ ಸಾರಿಸುವುದು +ವಿಕರ್ಣಂಗೆ
ಅರಸ+ಕೇಳ್+ಭೋಜನದ +ಸಮನಂ
ತರದ+ ವೀಳೆಯ+ಗಂಧ+ಮಾಲ್ಯ
ಅಂಬರವನೀವ್+ಅಧಿಕಾರ +ದುಶ್ಯಾಸನನ+ ವಶವಾಯ್ತು
ಅಚ್ಚರಿ:
(೧) ಸಾತ್ಯಕಿ, ವಿಕರ್ಣ, ದುಶ್ಯಾಸನ ಜವಾಬ್ದಾರಿಯನ್ನು ವಿವರಿಸುವ ಪದ್ಯ