ಕಳುಹಿದನು ಸುರಮುನಿಯನುದರದೊ
ಳಿಳಿದು ದಂತಸ್ತಾಪ ಯಜ್ಞದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರನರಯಣನ (ಸಭಾ ಪರ್ವ, ೧ ಸಂಧಿ, ೯೮ ಪದ್ಯ)
ತಾತ್ಪರ್ಯ:
ಧರ್ಮರಾಯನು ನಾರದರನ್ನು ಬೀಳ್ಕೊಟ್ಟನು, ರಾಜಸೂಯದ ಯಜ್ಞದ ತಾಪವು ಅವನ ಹಲ್ಲುಗಳಿಂದ ಆತನ ಹೊಟ್ಟೆಯವರೆಗೂ ಮುಟ್ಟಿತು, ಈ ಮಹಾಯಾಗವನ್ನು ಮಾಡುವುದು ಎಷ್ಟು ಕಷ್ಟವೆಂದು ಅವನ ಪ್ರತಿನಡಿಗೆಯಲ್ಲೂ ನೆನೆದು ನಡುಗುತ್ತಾ ಯೋಚನಾ ಭಂಗಿಯಲಿ ಅವನ ಕೆನ್ನೆಯಮೇಲೆ ತನ್ನ ಕೈಯನ್ನು ಇಟ್ಟನು. ತಲೆಯನ್ನು ಆಚೆ ಈಚೆ ತೂಗುತ್ತಾ ಚಿಂತಿಸಿ, ಕಳವಳಗೊಂಡು, ಸುಧಾರಿಸಿಕೊಂಡು ವೀರನಾರಾಯಣನನ್ನು ನೆನೆಯುತ್ತಿದ್ದನು.
ಅರ್ಥ:
ಕಳುಹು: ಬೀಳ್ಕೊಡು; ಸುರಮುನಿ: ನಾರದ; ಸುರ: ದೇವತೆ; ಮುನಿ: ಋಷಿ; ಉದರ: ಹೊಟ್ಟೆ; ದಂತ: ಹಲ್ಲು; ತಾಪ: ಸಂಕಟ, ಕಷ್ಟ; ಇಳಿ: ಕೆಳಕ್ಕೆ ಬರು; ಯಜ್ಞ: ಕ್ರತು; ಬಲುಹು: ಉತ್ತಮ; ನೆನೆದು: ಜ್ಞಾಪಿಸಿಕೊಳ್ಳು; ಕಂಪಿಸು:ನಡುಗು; ಕೈ: ಹಸ್ತ; ಗಲ್ಲ: ಕೆನ್ನೆ; ಒಲೆ: ತೂಗಾಡು; ಮಿಗೆ: ಮತ್ತು, ಅಧಿಕವಾಗು; ಕಳವಳ: ತಳಮಳ, ಗೊಂದಲ; ಪದುಳಿಸು: ಸಮಾಧಾನ; ಭೂಪತಿ: ರಾಜ; ತಿಲಕ: ಶ್ರೇಷ್ಠ; ಚಿಂತಿಸಿ: ಯೋಚಿಸು; ನೆನೆವು: ಸ್ಮರಿಸು;
ಪದವಿಂಗಡಣೆ:
ಕಳುಹಿದನು +ಸುರಮುನಿಯನ್+ಉದರದೊಳ್
ಇಳಿದು +ದಂತಸ್ತಾಪ+ ಯಜ್ಞದ
ಬಲುಹ +ನೆನೆದ್+ಅಡಿಗಡಿಗೆ +ಕಂಪಿಸಿ +ಕೈಯ +ಗಲ್ಲದಲಿ
ಒಲೆದೊಲೆದು +ಭಾವದಲಿ+ ಮಿಗೆ +ಕಳ
ವಳಿಸಿ +ಪದುಳಿಸಿ +ಕೊಳುತ +ಭೂಪತಿ
ತಿಲಕ +ಚಿಂತಿಸಿ +ನೆನೆವುತಿದ್ದನು+ ವೀರನರಯಣ
ಅಚರಿ:
(೧) ಜೋಡಿ ಪದಗಳು – ನೆನೆದು, ಅಡಿಗಡಿಗೆ, ಒಲೆದೊಲೆದು
(೨) ಯೋಚನೆಯ ತೀವ್ರತೆಯನ್ನು ಬಣ್ಣಿಸಲು – ನೋವು ಹಲ್ಲಿನಿಂದ ಹೊಟ್ಟೆಯೊಳಗೆ ಇಳಿಯಿತು – ಉದರದೊಳಿಳಿದು ದಂತಸ್ತಾಪ
(೩) ಯೋಚಿಸುವ ಬಗೆ: ಕಂಪಿಸಿ ಕೈಯ ಗಲ್ಲದಲಿ, ಒಲೆದೊಲೆದು ಭಾವದಲಿ
(೪) ಯುಧಿಷ್ಠಿರನನ್ನು ಭೂಪತಿ ತಿಲಕ ನೆಂದು ಕರೆದಿರುವುದು