ಎಸುಗೆಯೊಳ್ಳಿತು ಶರಬನತಿ ಸಾ
ಹಸಿಕನೈ ಬಿಲ್ಲಾಳಲಾ ಸರಿ
ಬೆಸನನೆಚ್ಚನು ನಮ್ಮೊಡನೆ ಮಝಪೂತುಪಾಯ್ಕೆನುತೆ
ಹೊಸಮಸೆಯ ಹೊಗರಲಗುಗಲದ
ಳ್ಳಿಸುವ ಧಾರೆಯ ಕೆಂಗರಿಯ ಡಾ
ಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೪ ಪದ್ಯ)
ತಾತ್ಪರ್ಯ:
ಅರ್ಜುನನು ಶಬರನ ಬಿಲ್ಲುಗಾರಿಕೆಯನ್ನು ನೋಡಿ, ಈ ಬೇಡನು ಅತಿ ಸಾಹಸಿ, ಇವನ ಬಾಣ ಪ್ರಯೋಗವು ಹೆಚಿದನು, ಇವನು ಮಹಾಸಾಹಸಿ, ನನ್ನೊಡನೆ ಸರಿಸಮವಾಗಿ ಕಾದುತ್ತಿದ್ದಾನೆ. ಭಲೇ ಎನ್ನುತ್ತಾ ಹೊಸದಾಗಿ ಮಸೆದ ಹೊಳೆಯುವ ಅಲಗಿನ, ಉರಿಯೇಳುವ ಕೆಂಗರಿಗಳ ಬಾಣಗಳ ಸಮುದ್ರವನ್ನೇ ಶಿವನ ಮೇಲೆ ಕವಿಸಿದನು.
ಅರ್ಥ:
ಎಸುಗೆ: ಬಾಣದ ಹೊಡೆತ; ಒಳ್ಳಿತು: ಚೆನ್ನಾಗಿದೆ; ಶಬರ: ಬೇಡ; ಅತಿ: ಬಹಳ; ಸಾಹಸಿ: ಪರಾಕ್ರಮಿ; ಬೆಲ್ಲು: ಧನಸ್ಸು; ಬಿಲ್ಲಾಳ: ಶೂರ; ಸರಿಬೆಸನು: ಸರಿಸಮಾನನಾಗಿ; ಎಚ್ಚನು: ಬಾಣ ಪ್ರಯೊಗ; ಮಝ: ಭಲೆ; ಪೂತು: ಕೊಂಡಾಟದ ಮಾತು; ಹೊಸ: ನವೀನ; ಮಸೆ: ಕಾಂತಿ, ಹೊಳಪು; ಹೊಗರು: ಕಾಂತಿ; ಧಾರೆ: ಪ್ರವಾಹ; ಕೆಂಗರಿ: ಕೆಂಪಾದ ಗರಿ; ಢಾಳಿಸು: ಕಾಂತಿಯುಳ್ಳ; ಕಣೆ: ಬಾಣ; ಶರನಿಧಿ: ಬಾಣಗಳ ಸಾಗರ; ಕವಿಸು: ಆವರಿಸು; ಕಲಿ: ಶೂರ;
ಪದವಿಂಗಡಣೆ:
ಎಸುಗೆ+ಒಳ್ಳಿತು +ಶರಬನ್+ಅತಿ +ಸಾ
ಹಸಿಕನೈ +ಬಿಲ್ಲಾಳಲಾ+ ಸರಿ
ಬೆಸನನ್+ಎಚ್ಚನು +ನಮ್ಮೊಡನೆ +ಮಝಪೂತುಪಾಯ್ಕೆನುತೆ
ಹೊಸಮಸೆಯ+ ಹೊಗರ್+ಅಲಗುಗಲದ್
ಅಳ್ಳಿಸುವ +ಧಾರೆಯ +ಕೆಂಗರಿಯ +ಡಾ
ಳಿಸುವ +ಕಣೆಗಳ+ ಶರನಿಧಿಯ +ಕವಿಸಿದನು +ಕಲಿಪಾರ್ಥ
ಅಚ್ಚರಿ:
(೧) ಹೊಗಳುವ ನುಡಿ – ಮಝಪೂತು
(೨) ಅರ್ಜುನನು ಬಾಣಗಳನ್ನು ಬಿಡುವ ಪರಿ – ಹೊಸಮಸೆಯ ಹೊಗರಲಗುಗಲದ
ಳ್ಳಿಸುವ ಧಾರೆಯ ಕೆಂಗರಿಯ ಡಾಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ