ಪದ್ಯ ೧೯: ಧೌಮ್ಯರು ಯಾವ ಸಲಹೆಯನ್ನು ನೀಡಿದರು?

ಬರಿನುಡಿಗಳೇಕಕಟ ನಿಮ್ಮಯ
ಹೊರಿಗೆಕಾರನು ಕೃಷ್ಣನಾತನ
ಮರೆಯ ಹೊಕ್ಕರಿಗುಂಟೆ ದುಃಖ ದರಿದ್ರ ಕಷ್ಟಭಯ
ಅರಿಯಿರೇ ಸೆಳೆ ಸೀರೆಯಲಿ ಸತಿ
ಯೊರಲಲಕ್ಷಯವಿತ್ತು ತನ್ನನು
ಮೆರೆದ ಮಹಿಮಾರ್ಣವನ ಭಜಿಸುವುದೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕೇವಲ ಮಾತುಗಳಿಂದ ಏನು ಪ್ರಯೋಜನವಿಲ್ಲ, ಕೃಷ್ಣನೇ ನಿಮ್ಮ ಆಗುಹೋಗುಗಳನ್ನು ಹೊತ್ತಿದ್ದಾನೆ. ಅವನ ಆಶ್ರಯ ಹೊಕ್ಕವರಿಗೆ ದುಃಖ ದಾರಿದ್ರ್ಯ, ಕಷ್ಟ ಭಯಗಳಿಲ್ಲ. ಹಿಂದೆ ವಸ್ತ್ರಾಪಹರಣದ ಕಾಲದಲ್ಲಿ ದ್ರೌಪದಿಯು ಮೊರೆಯಿಡಲು ಅಕ್ಷಯ ವಸ್ತ್ರವನ್ನು ಕೊಟ್ಟು ಕಾಪಾಡಿದ ಮ್ಹೈಮಾಸಮುದ್ರನನ್ನು ಭಜಿಸಿರಿ ಎಂದು ಧೌಮ್ಯರು ಸಲಹೆ ನೀಡಿದರು.

ಅರ್ಥ:
ಬರಿ: ಕೇವಲ; ನುಡಿ: ಮಾತು; ಅಕಟ: ಅಯ್ಯೋ; ಹೊರೆ: ಭಾರ; ಮರೆ: ಆಸರೆ, ಆಶ್ರಯ; ಹೊಕ್ಕು: ಸೇರು; ದುಃಖ: ದುಗುಡ; ದರಿದ್ರ: ಬಡವ, ಧನಹೀನ; ಕಷ್ಟ: ಕಠಿಣ; ಭಯ: ಅಂಜಿಕೆ; ಅರಿ: ತಿಳಿ; ಒರಲು: ಅರಚು, ಕೂಗಿಕೊಳ್ಳು; ಸೆಳೆ: ಜಗ್ಗು, ಎಳೆ; ಸೀರೆ: ವಸ್ತ್ರ; ಸತಿ: ಹೆಣ್ಣು, ಹೆಂಡತಿ; ಅಕ್ಷಯ: ನಾಶವಾಗದಿರುವ; ಮೆರೆ: ಹೊಳೆ, ಪ್ರಕಾಶಿಸು; ಮಹಿಮಾರ್ಣವ: ಮಹಾಮಹಿಮ, ಶ್ರೇಷ್ಠ; ಭಜಿಸು: ಆರಾಧಿಸು;

ಪದವಿಂಗಡಣೆ:
ಬರಿನುಡಿಗಳ್+ಏಕ್+ಅಕಟ +ನಿಮ್ಮಯ
ಹೊರಿಗೆಕಾರನು+ ಕೃಷ್ಣನ್+ಆತನ
ಮರೆಯ +ಹೊಕ್ಕರಿಗುಂಟೆ +ದುಃಖ +ದರಿದ್ರ +ಕಷ್ಟ+ಭಯ
ಅರಿಯಿರೇ +ಸೆಳೆ +ಸೀರೆಯಲಿ +ಸತಿ
ಒರಲಲ್+ಅಕ್ಷಯವಿತ್ತು +ತನ್ನನು
ಮೆರೆದ+ ಮಹಿಮಾರ್ಣವನ +ಭಜಿಸುವುದ್+ಎಂದನಾ +ಧೌಮ್ಯ

ಅಚ್ಚರಿ:
(೧) ಮರೆ, ಮೆರೆ – ಪದಗಳ ಬಳಕೆ
(೨) ಕೃಷ್ಣನ ಹಿರಿಮೆ – ಆತನ ಮರೆಯ ಹೊಕ್ಕರಿಗುಂಟೆ ದುಃಖ ದರಿದ್ರ ಕಷ್ಟಭಯ