ಪದ್ಯ ೧೭: ಪದ್ಮವ್ಯೂಹದ ರಚನೆ ಹೇಗಿತ್ತು?

ನಿಲಿಸಿದನು ರಾವುತರನಾ ಹೊರ
ವಳಯದಲಿ ರಾವುತರು ಮುರಿದರೆ
ನಿಲುವುದೊಗ್ಗಿನ ದಂತಿಘಟೆ ಗಜಸೇನೆಗಡಹಾಗಿ
ತೊಳಗಿದವು ತೇರುಗಳು ತೇರಿನ
ದಳಕೆ ತಾನೊತ್ತಾಗಿ ರಣದ
ಗ್ಗಳೆಯರಿದ್ದುದು ರಾಯನೊಡಹುಟ್ಟಿದರು ಸಂದಣಿಸಿ (ದ್ರೋಣ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೊರವಲಯದಲ್ಲಿ ರಾವುತರನ್ನು ನಿಲ್ಲಿಸಿದನು. ರಾವುತರು ಹಿಮ್ಮೆಟ್ಟಿದರೆ ಆನೆಗಳು ಭದ್ರ ಕೋಟೆಯಂತೆ ಹಿಂದೆ ಬೆಂಬಲವಾಗುವವು, ಆನೆಗಳ ಹಿಂದೆ ರಥಗಳು ನಿಂತವು. ರಥಗಳ ಹಿಂದೆ ರಣಶ್ರರಲ್ಲಿ ಶ್ರೇಷ್ಠರಾದ ಕೌರವನ ತಮ್ಮಂದಿರಿದ್ದರು.

ಅರ್ಥ:
ನಿಲಿಸು: ಸ್ಥಿರವಾಗಿರು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹೊರವಳಯ: ಆಚೆ; ಮುರಿ: ಸೀಳು; ಒಗ್ಗು: ಗುಂಪು, ಸಮೂಹ; ದಂತಿಘಟೆ: ಆನೆಯ ಗುಂಪು; ಗಜ: ಆನೆ; ಸೇನೆ: ಸೈನ್ಯ; ಗಡ: ದುರ್ಗ; ತೊಳಗು:ಕಾಂತಿ, ಪ್ರಕಾಶ; ತೇರು: ಬಂಡಿ; ದಳ: ಸೈನ್ಯ; ರಣ: ಯುದ್ಧರಂಗ; ಅಗ್ಗ: ಶ್ರೇಷ್ಠ; ಅರಿ: ತಿಳಿ; ರಾಯ: ರಾಜ; ಒಡಹುಟ್ಟು: ಜೊತೆಗೆ ಹುಟ್ಟಿದ; ಸಂದಣಿಸು: ಗುಂಪು ಗೂಡು;

ಪದವಿಂಗಡಣೆ:
ನಿಲಿಸಿದನು+ ರಾವುತರನಾ +ಹೊರ
ವಳಯದಲಿ +ರಾವುತರು +ಮುರಿದರೆ
ನಿಲುವುದ್+ಒಗ್ಗಿನ +ದಂತಿಘಟೆ +ಗಜಸೇನೆಗ್+ಅಡಹಾಗಿ
ತೊಳಗಿದವು +ತೇರುಗಳು +ತೇರಿನ
ದಳಕೆ +ತಾನೊತ್ತಾಗಿ +ರಣದ್
ಅಗ್ಗಳೆ+ಅರಿದುದು +ರಾಯನ್+ಒಡಹುಟ್ಟಿದರು +ಸಂದಣಿಸಿ

ಅಚ್ಚರಿ:
(೧) ದಂತಿ, ಗಜ – ಸಮಾನಾರ್ಥಕ ಪದ