ಪದ್ಯ ೧೭: ಧರ್ಮಜನನ್ನು ಯಾರು ಕರೆಸಿಕೊಂಡರು?

ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನಪುರಿಗೆ ಯತಿವೇ
ಷದಲಿ ಬಂದನು ಹೊನ್ನಸಾರಿಯ ಚೀಲ ಕಕ್ಷದಲಿ
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ (ವಿರಾಟ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನನ್ನು ಸಂತೈಸಿ ಧರ್ಮರಾಯನು ಯತಿವೇಷದಿಂದ ಮತ್ಸ್ಯನಗರಕ್ಕೆ ಬಂದನು. ಅವನು ಬಂಗಾರದ ಪಗಡೆಯ ಚೀಲವನ್ನು ಕಂಕುಳಿನಲ್ಲಿ ಅವಚಿಕೊಂಡಿದ್ದನು. ಅವನ ತೇಜಸ್ಸನ್ನು ನೋಡಿ ಎದುರಿನಲ್ಲಿ ಕಂಡವರು ನಮಸ್ಕರಿಸಿದರು. ವಿರಾಟನು ಅವನನ್ನು ಕರೆಸಿಕೊಂಡು ಕೇಳಿದನು.

ಅರ್ಥ:
ಹದುಳ: ಸೌಖ್ಯ, ಕ್ಷೇಮ; ನಿರ್ಮದ: ಅಹಂಕಾರವಿಲ್ಲದ; ಪುರಿ: ಊರು; ಯತಿ: ಋಷಿ; ವೇಷ: ರೂಪ; ಬಂದು: ಆಗಮಿಸು; ಹೊನ್ನು: ಚಿನ್ನ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಚೀಲ: ಸಂಚಿ; ಕಕ್ಷ: ಕಂಕಳು; ಇದಿರು: ಎದುರು; ಆನತ: ನಮಸ್ಕರಿಸಿದವನು; ಕಂಡು: ನೋದು; ಉದಿತ: ಹುಟ್ಟುವ; ತೇಜ: ಕಾಂತಿ; ಪುಂಜ: ಸಮೂಹ, ಗುಂಪು; ಸೊಂಪು: ಸೊಗಸು, ಚೆಲುವು; ಒದಗು: ಲಭ್ಯ, ದೊರೆತುದು; ಕಾಣಿಸು: ಗೋಚರಿಸು; ಬೆಸ: ಕೆಲಸ, ಕಾರ್ಯ, ಅಪ್ಪಣೆ;

ಪದವಿಂಗಡಣೆ:
ಹದುಳವಿಟ್ಟನು+ ಭೀಮನನು +ನಿ
ರ್ಮದನು +ಮತ್ಸ್ಯನ+ಪುರಿಗೆ +ಯತಿ+ವೇ
ಷದಲಿ +ಬಂದನು +ಹೊನ್ನ+ಸಾರಿಯ +ಚೀಲ +ಕಕ್ಷದಲಿ
ಇದಿರೊಳ್+ಆನತರ್+ಆಯ್ತು +ಕಂಡವರ್
ಉದಿತ +ತೇಜಃ+ಪುಂಜದಲಿ +ಸೊಂ
ಪೊದವಿ +ಬರಲು +ವಿರಾಟ +ಕಾಣಿಸಿಕೊಂಡು +ಬೆಸಗೊಂಡ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ನಿರ್ಮದನು, ಉದಿತ ತೇಜಃಪುಂಜ