ಪದ್ಯ ೮೯: ಅಪ್ಸರೆಯರು ಹೇಗೆ ಕಂಡರು?

ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳ ಬಿರುದಂಕಕಾಂತಿಯರಿಂದ್ರನೋಲಗದ (ಅರಣ್ಯ ಪರ್ವ, ೮ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕಸ್ತೂರಿಯ ಭರಣಿಯ ಮುಚ್ಚಳವನ್ನು ತೆಗೆದರೆಮ್ಬಮ್ತೆ ಬಾಗಿಲನ್ನು ತೆಗೆಯಲು, ದಿವ್ಯ ದೇಹ ಗಂಧವು ಹಬ್ಬಲು ಅಪ್ಸರೆಯರು ಬಂದರು. ಅವರ ಕಡೆಗಣ್ನುಗಳ ಹೊಳಪು, ಚೂಪಾದ ಅಲಗುಗಳಂತಿದ್ದವು, ಮುಖಕ್ಕೆ ಮುಸುಕು ಹಾಕಿದ್ದರು, ಮನ್ಮಥ ಸಮರದಲ್ಲಿ ಮೇಲುಗೈಯೆಂಬ ಬಿರುದಿನ ಅನಂಗನ ಆಳುಗಳಂತೆ ತೋರಿದರು.

ಅರ್ಥ:
ಉಗಿ: ಹೊರಹಾಕು; ಕತ್ತುರಿ: ಕಸ್ತೂರಿ; ತವಲಾಯಿ: ಕರ್ಪೂರದ ಹಳಕು, ಬಿಲ್ಲೆ; ಮುಚ್ಚಳ: ಪೆಟ್ಟಿಗೆ, ಕರಡಿಗೆ ಪಾತ್ರೆ; ಕವಾಟ: ಬಾಗಿಲು; ತೆಗೆ: ಈಚೆಗೆ ತರು; ಕವಿ: ಆವರಿಸು; ದಿವ್ಯ: ಶ್ರೇಷ್ಠ; ಪರಿಮಳ: ಸುಗಂಧ; ಸಾರ: ರಸ; ಪೂರ: ಪೂರ್ತಿಯಾಗಿ; ಹೊಗರು: ಕಾಂತಿ, ಪ್ರಕಾಶ; ಅಲಗು: ಹರಿತವಾದ ಅಂಚು; ಹೊಳಹು: ಕಾಂತಿ; ಕಡೆ: ಕೊನೆ; ಕಣ್ಣು: ನಯನ; ಬಲು: ದೊಡ್ಡ; ಗರುವಾಯಿ: ಠೀವಿ; ಮುಸುಕು: ಹೊದಿಕೆ; ಯೋನಿ; ಬಿಗುಹು: ಬಿಗಿ; ಬಿರುದು: ಪ್ರಸಿದ್ಧಿ; ಕಾಂತಿ: ಪ್ರಕಾಶ; ಇಂದ್ರ: ಸುರಪತಿ; ಓಲಗ; ದರ್ಬಾರು;

ಪದವಿಂಗಡಣೆ:
ಉಗಿದರೋ+ ಕತ್ತುರಿಯ +ತವಲಾ
ಯಿಗಳ +ಮುಚ್ಚಳವ್+ಎನೆ +ಕವಾಟವ
ತೆಗೆಯೆ +ಕವಿದರು+ ದಿವ್ಯ+ಪರಿಮಳ +ಸಾರ +ಪೂರವಿಸೆ
ಹೊಗರ್+ಅಲಗು +ಹೊಳಹುಗಳ +ಕಡೆಗ
ಣ್ಣುಗಳ +ಬಲುಗರುವಾಯಿ +ಮುಸುಕಿನ
ಬಿಗುಹುಗಳ+ ಬಿರುದಂಕ+ಕಾಂತಿಯರ್+ಇಂದ್ರನ್+ಓಲಗದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉಗಿದರೋ ಕತ್ತುರಿಯ ತವಲಾಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ