ಪದ್ಯ ೨೪: ಶಲ್ಯನು ಯಾವ ಶಪಥವನ್ನು ಮಾಡಿದನು?

ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರೆ ನಿಲುವೆನವರೊಡನೆ
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ (ಶಲ್ಯ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಪಾಂಡವರೇ, ನನ್ನೊಡನೆ ಯುದ್ಧಕ್ಕೆ ಧರ್ಮಜನು ನಿಲ್ಲುವನೋ, ಅಥವ ಅರ್ಜುನ ಭೀಮರು ನಿಲ್ಲುವರೋ? ಯಾರು ಆಯುಧಪಾಣಿಗಳಾಗಿ ಬರುವರೋ ಅವರೊಡನೆ ಕಾಳಗವನ್ನು ಮಾಡುತ್ತೇನೆ, ಉಳಿದ ಸೇನಾನಾಯಕರೊಡನೆ ಕೌರವನಾಣೆ ಯುದ್ಧಮಾಡುವುದಿಲ್ಲ ಎಂದು ಶಲ್ಯನು ಶಪಥ ಮಾಡಿದನು.

ಅರ್ಥ:
ರಾಯ: ರಾಜ; ನಿಲ್ಲು: ತಡೆ; ಮೇಣ್: ಅಥವಾ; ವಾಯುಸುತ: ಭೀಮ; ಸುತ: ಮಗ; ಆಯುಧ: ಶಸ್ತ್ರ; ಕೊಂಡು: ಗ್ರಹಿಸು; ಹೊಕ್ಕು: ಸೇರು; ನಾಯಕ: ಒಡೆಯ; ಮಿಕ್ಕ: ಉಳಿದ; ಬಿಲು: ಬಿಲ್ಲು, ಚಾಪ; ಸಾಯಕ: ಬಾಣ, ಶರ; ಆಣೆ: ಪ್ರಮಾಣ; ಮದ: ಅಹಂಕಾರ; ಏರು: ಹೆಚ್ಚಾಗು; ಕಲಿ: ಶೂರ; ಒಡ್ಡು: ನೀಡು;

ಪದವಿಂಗಡಣೆ:
ರಾಯ+ ನಿಲುವನೊ +ಮೇಣು +ಪಾರ್ಥನೊ
ವಾಯುಸುತನೋ +ನಿಮ್ಮ +ಮೂವರೊಳ್
ಆಯುಧವ+ ಕೊಂಡಾರು +ಹೊಕ್ಕರೆ +ನಿಲುವೆನ್+ಅವರೊಡನೆ
ನಾಯಕರು +ಮಿಕ್ಕವರೊಡನೆ+ ಬಿಲು
ಸಾಯಕವನ್+ಒಡ್ಡಿದಡೆ +ಕೌರವ
ರಾಯನಾಣೆ+ಎನುತ್ತ +ಮದವೇರಿದನು +ಕಲಿ+ಶಲ್ಯ

ಅಚ್ಚರಿ:
(೧) ನಾಯಕ, ಸಾಯಕ – ಪ್ರಾಸ ಪದ
(೨) ರಾಯ – ೧, ೬ ಸಾಲಿನ ಮೊದಲ ಪದ