ಪದ್ಯ ೧೭: ಭೀಮನು ಅಶ್ವತ್ಥಾಮನಿಗೆ ಏನು ಹೇಳಿದ?

ನಿಲ್ಲು ಗುರುಸುತ ಶೌರ್ಯಪಣ ನ
ಮ್ಮಲ್ಲಿಯೇ ಹುಲುಜೀವರಿಗೆ ಜವ
ನಲ್ಲಿ ಮೇಳವೆ ಉಗುಳು ಪಂಚದ್ರೌಪದೀಸುತರ
ಬಿಲ್ಲ ಗುರು ನೀನಾದಡೆಮಗೇ
ನಿಲ್ಲಿ ದ್ರೌಪದಿಯಕ್ಷಿಜಲಕೃಪೆ
ಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ (ಗದಾ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ಗುಡುಗುತ್ತಾ, ಎಲೈ ಗುರುಪುತ್ರಾ ನಿಲ್ಲು, ಶೌರ್ಯದ ಆಟವನ್ನು ನಮ್ಮಲ್ಲಿ ಆಡಿದೆಯಾ? ಮಕ್ಕಳಿಗೆ ಯಮನೊಡನೆ ಆಟವೇ? ಐವರು ದ್ರೌಪದೀ ಪುತ್ರರನ್ನು ಉಗುಳು. ನೀನು ಬಿಲ್ವಿದ್ಯೆಯ ಗುರುವಾಗಿರಬಹುದು. ಆದರೇನೆಅಂತೆ. ದ್ರೌಪದಿಯ ಕಣ್ಣೀರು, ಕೃಪೆಯಲ್ಲಿ ಮುಂದುವರಿಯಬೇಕು ಎಂದನು.

ಅರ್ಥ:
ಸುತ: ಮಗ; ಶೌರ್ಯ: ಸಾಹಸ, ಪರಾಕ್ರಮ; ಪಣ: ಸಂಕಲ್ಪ, ಶಪಥ; ಹುಲು: ಅಲ್ಪ; ಜೀವ: ಪ್ರಾಣ; ಜವ: ಯಮ; ಮೇಳ: ಗುಂಪು; ಉಗುಳು: ಹೊರಹಾಕು; ಬಿಲ್ಲು: ಚಾಪ; ಗುರು: ಆಚಾರ್ಯ; ಅಕ್ಷಿ: ಕಣ್ಣು; ಅಕ್ಷಿಜಲ: ಕಣ್ಣೀರು; ಕೃಪೆ: ದಯೆ; ಲಂಬಿಸು: ಬೆಳೆಸು, ತೂಗಾಡು; ಮೂದಲಿಸು: ಹಂಗಿಸು;

ಪದವಿಂಗಡಣೆ:
ನಿಲ್ಲು +ಗುರುಸುತ +ಶೌರ್ಯಪಣ+ ನ
ಮ್ಮಲ್ಲಿಯೇ +ಹುಲು+ಜೀವರಿಗೆ +ಜವ
ನಲ್ಲಿ+ ಮೇಳವೆ +ಉಗುಳು +ಪಂಚ+ದ್ರೌಪದೀಸುತರ
ಬಿಲ್ಲ+ ಗುರು +ನೀನಾದಡ್+ಎಮಗೇ
ನಿಲ್ಲಿ+ ದ್ರೌಪದಿ+ಅಕ್ಷಿಜಲ+ಕೃಪೆ
ಯಲ್ಲಿ+ ಲಂಬಿಸಬೇಕ್+ಎನುತ +ಮೂದಲಿಸಿದನು +ಭೀಮ

ಅಚ್ಚರಿ:
(೧) ಅಶ್ವತ್ಥಾಮನು ಸಾಯಬೇಕೆಂದು ಹೇಳುವ ಪರಿ – ದ್ರೌಪದಿಯಕ್ಷಿಜಲ ಕೃಪೆಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ

ಪದ್ಯ ೨: ಧೃತರಾಷ್ಟ್ರನು ಯಾರ ಬಗ್ಗೆ ವಿಚಾರಿಸಿದನು?

ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ (ಶಲ್ಯ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಅಯ್ಯೋ ಸಂಜಯ ನೀನು ಹುಚ್ಚ, ಬಿರುಗಾಳಿ ಬೀಸಿದಾಗ ಕುಲಪರ್ವತಗಳ ಬ್ಸುಗೆ ಕಿತ್ತು ಅವು ಹಾರಿಹೋದವು, ಇನ್ನು ಕ್ಷುಲ್ಲಕವಾದ ದಿಬ್ಬಗಳ ಪಾಡೇನು? ಕರ್ಣನ ಸನ್ನಾಹವೇ ನಾಶವಾಗಿ ಹೋಯಿತು, ಇನ್ನು ಕೌರವನ ಪಾಡೇನು? ಶಲ್ಯನ ಗತಿಯೇನು? ಅದು ಹಾಗಿರಲಿ ಕೌರವಕುಲವನ್ನು ನಾಶಮಾಡಿದರೇ ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಮರುಳ: ಮೂಢ; ಗಾಳಿ: ಅನಿಲ, ವಾಯು; ಕುಲಗಿರಿ: ದೊಡ್ಡ ಬೆಟ್ಟ; ಬೈಸಿಕೆ: ಮಂಡಿಯೂರಿ ಕುಳಿತುಕೊಳ್ಳುವುದು; ಬಿಚ್ಚು: ಹೊರತರು; ಹುಲು: ಕ್ಷುಲ್ಲ; ಮೊರಡಿ: ದಿಣ್ಣೆ, ಗುಡ್ಡ; ಬಿಗು: ಗಟ್ಟಿ; ಬೀತುದು: ಮುಗಿಯಿತು; ಒಡ್ಡವಣೆ: ಗುಂಪು, ಸನ್ನಾಹ; ಪಾಡು: ಸ್ಥಿತಿ; ಮತ್ಸರ: ಹೊಟ್ಟೆಕಿಚ್ಚು; ಸಾಕು: ನಿಲ್ಲಿಸು; ಸವರು: ನಾಶ; ಅನ್ವಯ: ವಂಶ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಮರುಳೆ +ಸಂಜಯ +ಗಾಳಿಯಲಿ +ಕುಲ
ಗಿರಿಯ +ಬೈಸಿಕೆ +ಬಿಚ್ಚಿದಡೆ +ಹುಲು
ಮೊರಡಿಗಳ +ಬಿಗುಹೇನು +ಬೀತುದು +ಕರ್ಣನ್+ಒಡ್ಡವಣೆ
ಕುರುಪತಿಯ +ಪಾಡೇನು +ಮಾದ್ರೇ
ಶ್ವರನ +ಮತ್ಸರವೇನು +ಸಾಕಂ
ತಿರಲಿ+ ಸವರಿತೆ+ ಕೌರವ+ಅನ್ವಯವ್+ಎಂದನ್+ಅಂಧನೃಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿಯಲಿ ಕುಲಗಿರಿಯ ಬೈಸಿಕೆ ಬಿಚ್ಚಿದಡೆ ಹುಲುಮೊರಡಿಗಳ ಬಿಗುಹೇನು

ಪದ್ಯ ೪೨: ಸುಪ್ರತೀಕಗಜವು ಹೇಗೆ ಮುನ್ನಡೆಯಿತು?

ಮಿಗೆ ತಿಮಿಂಗಿಲನೊಡನೆ ಹುಲು ಮೀ
ನುಗಳು ಮಾಡುವುದೇನು ಹೊರ ಕಾ
ಲುಗಳ ಹೋರಟೆ ಕಾಣಲಾದುದು ಪರರ ಥಟ್ಟಿನಲಿ
ತೆಗೆಯೆ ರಿಪುಬಲ ಕೊಲುತ ಬಂದುದು
ದಿಗಿಭವಿದರೊಡನೈದಿ ದ್ರೋಣಾ
ದಿಗಳು ಹೊಕ್ಕುದು ಧರ್ಮಪುತ್ರನ ಹಿಡಿವ ತವಕದಲಿ (ದ್ರೋಣ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ತಿಮಿಂಗಿಲದೊಡನೆ ಸಣ್ಣಮೀನುಗಳು ಏನು ಮಾಡಬಲ್ಲವು? ಶತ್ರುಗಳು ಓಡಲಾರಂಭಿಸಿದರು ದಿಗ್ಗಜವು ಅವರನ್ನು ಕೊಲ್ಲುತ್ತಾ ಬಂದಿತು. ಅದರೊಡನೆ ದ್ರೋಣನೇ ಮೊದಲಾದವರು ಧರ್ಮಜನನ್ನು ಹಿಡಿಯಲು ಬಂದರು.

ಅರ್ಥ:
ಮಿಗೆ: ಅಧಿಕ; ತಿಮಿಂಗಿಲ: ಸಮುದ್ರದ ದೈತ್ಯ ಪ್ರಾಣಿ; ಹುಲು: ಅಲ್ಪ; ಮೀನು: ಮತ್ಸ್ಯ; ಹೊರ: ಆಚೆ; ಕಾಲು: ಪಾದ; ಹೋರಟೆ: ಕಾಳಗ, ಯುದ್ಧ; ಕಾಣು: ತೋರು; ಪರರ: ಅನ್ಯ; ಥಟ್ಟು: ಗುಂಪು; ತೆಗೆ: ಹೊರತರು; ರಿಪುಬಲ: ವೈರಿ ಸೈನ್ಯ; ಕೊಲು: ಸಾಯಿಸು; ಬಂದುದು: ಆಗಮಿಸು; ದಿಗಿಭ: ದಿಕ್ಕಿನ ಆನೆ, ದಿಗ್ಗಜ; ಐದು: ಬಂದು ಸೇರು; ಆದಿ: ಮುಂತಾದ; ಹೊಕ್ಕು: ಸೇರು; ಹಿಡಿ: ಗ್ರಹಿಸು; ತವಕ: ಕಾತುರ;

ಪದವಿಂಗಡಣೆ:
ಮಿಗೆ +ತಿಮಿಂಗಿಲನೊಡನೆ +ಹುಲು +ಮೀ
ನುಗಳು +ಮಾಡುವುದೇನು +ಹೊರ +ಕಾ
ಲುಗಳ +ಹೋರಟೆ+ ಕಾಣಲಾದುದು+ ಪರರ+ ಥಟ್ಟಿನಲಿ
ತೆಗೆಯೆ +ರಿಪುಬಲ +ಕೊಲುತ +ಬಂದುದು
ದಿಗಿಭವ್+ಇದರೊಡನ್+ಐದಿ+ ದ್ರೋಣಾ
ದಿಗಳು +ಹೊಕ್ಕುದು +ಧರ್ಮಪುತ್ರನ +ಹಿಡಿವ +ತವಕದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಿಗೆ ತಿಮಿಂಗಿಲನೊಡನೆ ಹುಲು ಮೀನುಗಳು ಮಾಡುವುದೇನು

ಪದ್ಯ ೨೯: ಅರ್ಜುನನು ಯಾರೊಡನೆ ಯುದ್ಧಮಾಡಲು ಸಿದ್ಧನಾದನು?

ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರೆ ಬಿರುದನೆನುತವೆ
ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ (ಭೀಷ್ಮ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬಲವು ಅನಾಯಕವಾಯಿತೇ? ಸಾಧಾರಣ ಸೈನ್ಯದೆದುರಿನಲ್ಲಿ ನಿಮ್ಮ ಸತ್ವ, ಕೈಚಳಕ, ಕಲಿತನ, ಬಿಲುಗಾರತನಗಲನ್ನು ತೋರಿಸಿದಿರಿ ಅಷ್ಟೇ, ನಮ್ಮೊಡನೆ ಯುದ್ಧದಲ್ಲಿ ಗೆದ್ದು ನಿಮ್ಮ ಬಿರುದನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಅರ್ಜುನನು ಭೀಷ್ಮನೊಡನೆ ಯುದ್ಧಮಾಡಲು ಸಿದ್ಧನಾದನು.

ಅರ್ಥ:
ಬಲ: ಶಕ್ತಿ, ಸೈನ್ಯ; ನಾಯಕ: ಒಡೆಯ; ಅನಾಯಕ: ನಾಯಕನಿಲ್ಲದ ಸ್ಥಿತಿ; ವೃಥಾ: ಸುಮ್ಮನೆ; ಹುಲು: ಕ್ಷುಲ್ಲಕ; ದಳ: ಸೈನ್ಯ; ಅಗ್ಗಳಿಕೆ: ಶ್ರೇಷ್ಠ; ಅಳವು: ಶಕ್ತಿ, ಸಾಮರ್ಥ್ಯ; ಮನ: ಮನಸ್ಸು; ಕಲಿ: ಶೂರ; ಬಿಲುಗಾರ: ಬಿಲ್ವಿದ್ಯಾ ಚತುರ; ಬಲಿ: ಗಟ್ಟಿ, ದೃಢ, ಶಕ್ತಿಶಾಲಿ; ಮೆಚ್ಚು: ಪ್ರಶಂಸೆ; ಬಳಿಕ: ನಂತರ; ಹಡೆ: ಸೈನ್ಯ, ದಂಡು; ಬಿರುದು: ಗೌರವ ಸೂಚಕ ಪದ; ಕೈಯಿಕ್ಕು: ಹೋರಾಡು; ಕುಮಾರ: ಮಗ;

ಪದವಿಂಗಡಣೆ:
ಬಲವ್+ಅನಾಯಕವೇ +ವೃಥಾ +ಹುಲು
ದಳದೊಳಗೆ+ ನಿಮ್ಮಗ್ಗಳಿಕೆ+ ಕೈ
ಅಳವ+ ಮನ+ಕಲಿತನದ್+ಅಳವ+ ಬಿಲುಗಾರತನದ್+ಅಳವ
ಬಲಿಯಿರೇ +ನಮ್ಮೊಡನೆ +ಮೆಚ್ಚಿಸಿ
ಬಳಿಕ+ ಹಡೆಯಿರೆ+ ಬಿರುದನ್+ಎನುತವೆ
ಫಲುಗುಣನು +ಕೈಯಿಕ್ಕಿದನು +ಗಂಗಾಕುಮಾರನಲಿ

ಅಚ್ಚರಿ:
(೧) ಅಳವ ಪದದ ಬಳಕೆ – ೩ ಸಾಲಿನಲ್ಲಿ ೩ ಬಾರಿ
(೨) ಭೀಷ್ಮನನ್ನು ಹಂಗಿಸುವ ಪರಿ – ಬಲವನಾಯಕವೇ ವೃಥಾ ಹುಲುದಳದೊಳಗೆ ನಿಮ್ಮಗ್ಗಳಿಕೆ

ಪದ್ಯ ೨: ಕರ್ಣನು ದುರ್ಯೋಧನನಿಗೆ ಏನು ಹೇಳಿದ?

ಜೀಯ ದುಗುಡವಿದೇಕೆ ದಿವಿಜರ
ರಾಯ ಶಿಖಿ ಯಮ ನಿರುತಿ ಜಲಧಿಪ
ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ
ರಾಯ ಭಟರಿದೆ ನೇಮಿಸಾ ಸುರ
ರಾಯನೂರಿನ ಹಾಡುಗರ ಹುಲು
ನಾಯಕರಿಗಿನಿತೇಕೆ ಖತಿ ಬೆಸಸೆಂದನಾ ಕರ್ಣ (ಅರಣ್ಯ ಪರ್ವ, ೧೯ ಸಂಧಿ, ೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಸ್ಥಿತಿಯನ್ನು ನೋಡಿ, ಒಡೆಯಾ, ಇದಕ್ಕೇಕೆ ದುಃಖ, ದೇವೇಂದ್ರ, ಅಗ್ನಿ, ಯಮ, ನಿರುಋತಿ, ವರುಣ, ವಾಯು, ಕುಬೇರ, ಈಶಾನರ ಸಾಹಸಕ್ಕೆ ಮುರು ಪಟ್ತು ಹೆಚ್ಚಿನ ಸಾಹಸಿಗರು ನಿನ್ನ ಸೈನ್ಯದಲ್ಲಿದ್ದಾರೆ. ಅವರಿಗೆ ಅಪ್ಪಣೆ ಕೊಡು, ಅಮರಾವತಿಯ ಹಾಡುಗರ ಸಾಹಸಕ್ಕೆ ಇಷ್ಟೇಕೆ ಚಿಂತೆ ಎಂದು ಕೌರವನಿಗೆ ಹೇಳಿದನು.

ಅರ್ಥ:
ಜೀಯ: ಒಡೆಯ; ದುಗುಡ: ದುಃಖ; ದಿವಿಜ: ಸುರರು; ರಾಯ: ರಾಜ; ಶಿಖಿ: ಅಗ್ನಿ; ಯಮ: ಧರ್ಮದೇವತೆ; ನಿರುತಿ: ನೈಋತ್ಯದಿಕ್ಕಿನ ಒಡೆಯ; ರಾಕ್ಷಸ; ಜಲಧಿಪ: ವರುಣ; ಜಲಧಿ: ಸಾಗರ; ಧನದ: ಕುಬೇರ; ಧನ: ಐಶ್ವರ್ಯ; ಸಾಹಸ: ಪರಾಕ್ರಮ; ಮೂವಡಿ: ಮೂರು ಪಟ್ಟು; ಭಟ: ಸೈನಿಕ; ನೇಮಿ: ನಿಯಮವನ್ನು ಹೊಂದಿರುವವನು; ಸುರರಾಯ: ಇಂದ್ರ; ಊರು: ಪಟ್ಟಣ; ಹಾಡುಗರು: ಗಂಧರ್ವರು; ಹುಲು:ಕ್ಷುಲ್ಲ; ನಾಯಕ: ಒಡೆಯ; ಖತಿ: ಕೋಪ, ದುಃಖ; ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಜೀಯ+ ದುಗುಡವಿದೇಕೆ +ದಿವಿಜರ
ರಾಯ +ಶಿಖಿ +ಯಮ +ನಿರುತಿ+ ಜಲಧಿಪ
ವಾಯು +ಧನದ+ ಶಿವಾದಿಗಳ+ ಸಾಹಸಕೆ +ಮೂವಡಿಯ
ರಾಯ +ಭಟರಿದೆ +ನೇಮಿಸ್+ಆ+ ಸುರ
ರಾಯನ್+ಊರಿನ +ಹಾಡುಗರ +ಹುಲು
ನಾಯಕರಿಗಿನಿತ್+ಏಕೆ+ ಖತಿ+ ಬೆಸಸೆಂದನಾ +ಕರ್ಣ

ಅಚ್ಚರಿ:
(೧) ಅಗ್ನಿ, ವರುಣ, ಕುಬೇರನನ್ನು ಕರೆದ ಪರಿ – ಶಿಖಿ, ಜಲಧಿಪ, ಧನದ
(೨) ಅಮರಾವತಿ ಎಂದು ಕರೆಯಲು – ಸುರರಾಯನೂರು
(೩) ಗಂಧರ್ವರೆಂದು ಹೇಳಲು – ಹಾಡುಗರು ಪದದ ಬಳಕೆ