ಪದ್ಯ ೨೨: ಧೃತರಾಷ್ಟ್ರನ ಅಭಿಪ್ರಾಯವೇನು?

ಸಿರಿಗೆ ಸಫಲತೆಯಹುದು ನಾನಿದ
ನರಿಯೆ ನೀವವರಿದ್ದ ವಿಪಿನಾಂ
ತರಕೆ ಗಮಿಸುವುದುಚಿತವೇ ಮನಮುನಿಸುನೆರೆಬಲಿದು
ಕೆರಳಿದರೆ ಕಾಳಹುದು ಭೀಮನ
ದುರುಳತನವೀ ಕೌರವೇಂದ್ರನ
ಹುರುಡು ಹೊರೆಯೇರುವುದು ಮತವಲ್ಲೆಂದನಂಧನೃಪ (ಅರಣ್ಯ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪಾಂಡವರಿಗೆ ಹೊಟ್ಟೆಕಿಚ್ಚು ತರಿಸಿ ನಿಮ್ಮ ಐಶ್ವರ್ಯವು ಸಫಲವಾಗುವುದು ಹೇಗೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಧೃತರಾಷ್ಟ್ರನು ಹೇಳಿದನು. ಕಾಡಿನೊಳಗಿರುವ ಪಾಂಡವರ ಬಳಿಗೆ ಹೋಗುವುದು ಸರಿಯೆ? ಮನಸ್ಸಿನ ಕೋಪದ ಕಿಚ್ಚು ಕೆರಳಿದರೆ ಕೆಡಕಾಗುವುದಿಲ್ಲವೇ? ಭೀಮನ ದುರುಳತನವೂ ದುರ್ಯೋಧನನ ಮತ್ಸರವೂ ಹೆಚ್ಚುತ್ತದೆ. ಇದು ನನಗೆ ಇಷ್ಟವಿಲ್ಲ ಎಂದು ಧೃತರಾಷ್ಟ್ರನು ಅಸಮ್ಮತಿಯನ್ನು ಹೊರಹಾಕಿದನು.

ಅರ್ಥ:
ಸಿರಿ: ಐಶ್ವರ್ಯ; ಸಫಲತೆ: ಸಾರ್ಥಕ, ಯಶಸ್ಸು; ಅರಿ: ತಿಳಿ; ವಿಪಿನ: ಕಾಡು; ಅಂತರಕೆ: ಒಳಗೆ; ಗಮಿಸು: ಹೋಗು; ಉಚಿತ: ಸರಿಯಾದ; ಮನ: ಮನಸ್ಸು; ಮುನಿಸು: ಸಿಟ್ಟು; ನೆರೆ: ಸಮೀಪ, ಹತ್ತಿರ; ಬಲಿದು: ಹೆಚ್ಚಾಗು; ಕೆರಳು: ಉದ್ರಿಕ್ತವಾಗು; ಕಾಳಹ: ಯುದ್ಧ; ದುರುಳ: ದುಷ್ಟವಾದ; ಹುರುಡು: ಪೈಪೋಟಿ, ಸ್ಪರ್ಧೆ; ಹೊರೆ: ಭಾರ; ಏರು: ಹೆಚ್ಚಾಗು; ಮತ: ಅಭಿಪ್ರಾಯ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಸಿರಿಗೆ+ ಸಫಲತೆ+ಅಹುದು +ನಾನ್+ಇದನ್
ಅರಿಯೆ +ನೀವ್+ಅವರಿದ್ದ+ ವಿಪಿನಾಂ
ತರಕೆ+ ಗಮಿಸುವುದ್+ಉಚಿತವೇ +ಮನ+ಮುನಿಸು+ನೆರೆ+ಬಲಿದು
ಕೆರಳಿದರೆ+ ಕಾಳಹುದು +ಭೀಮನ
ದುರುಳತನವ್+ಈ+ ಕೌರವೇಂದ್ರನ
ಹುರುಡು +ಹೊರೆ+ಏರುವುದು +ಮತವಲ್ಲೆಂದನ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರನ ಚಿಂತೆ – ಭೀಮನ ದುರುಳತನವೀ ಕೌರವೇಂದ್ರನ ಹುರುಡು ಹೊರೆಯೇರುವುದು