ಪದ್ಯ ೮: ಧರ್ಮಜನು ಯಾರನ್ನು ಸನ್ಮಾನಿಸಿದನು?

ವರ ಮುನೀಂದ್ರರ ನಿಖಿಳ ದೇಶಾಂ
ತರದ ಭೂಸುರವರ್ಗವನು ಸ
ತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ
ಪರಿಜನವ ಪುರಜನವ ರತ್ನಾ
ಕರಪರೀತ ಮಹೀಜನವನಾ
ದರಿಸಿದನು ವೈಭವವಿಹಿತ ಸನ್ಮಾನ ದಾನದಲಿ (ಗದಾ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ಮುನೀಂದ್ರರು, ಎಲ್ಲಾ ದೇಶಗಲ ಬ್ರಾಹ್ಮಣರು, ಇವರೆಲ್ಲರಿಗೆ ಗೋ, ಭೂಮಿ, ವಸ್ತ್ರ, ಬಂಗಾರಗಲ ದಾನವನ್ನು ಕೊಟ್ಟು ಧರ್ಮಜನು ಸತ್ಕರಿಸಿದನು. ಪರಿಜನರು ಪುರಜನರು, ಸಮಸ್ತ ದೇಶಗಳ ಜನರನ್ನು ಧರ್ಮಜನು ವಿಹಿತವಾಗಿ ವೈಭವದಿಂದ ಸನ್ಮಾನಿಸಿದನು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ನಿಖಿಳ: ಎಲ್ಲಾ; ದೇಶ: ರಾಷ್ಟ್ರ; ಭೂಸುರ: ಬ್ರಾಹ್ಮಣ; ವರ್ಗ: ಗುಂಪು; ಸತ್ಕರಿಸು: ಆದರಿಸು; ಗೋ: ಆಕಳು; ಭೂಮಿ: ಅವನಿ; ವಸನ: ವಸ್ತ; ಹಿರಣ್ಯ: ಚಿನ್ನ; ದಾನ: ನೀಡುವ ಪದಾರ್ಥ; ಪರಿಜನ: ಬಂಧುಜನ; ಪುರಜನ: ಊರಿನ ಜನ; ರತ್ನಾಕರ: ಸಮುದ್ರ; ರತ್ನಾಕರಪರೀತ: ಸಮುದ್ರದಿಂದ ಸುತ್ತವರಿಯಲ್ಪಟ್ಟ; ಮಹೀ: ಭೂಮಿ; ಜನ: ಗುಂಪು; ಆದರಿಸು: ಗೌರವಿಸು; ವೈಭವ: ಶಕ್ತಿ, ಸಾಮರ್ಥ್ಯ; ಸನ್ಮಾನ: ಗೌರವ;

ಪದವಿಂಗಡಣೆ:
ವರ +ಮುನೀಂದ್ರರ+ ನಿಖಿಳ +ದೇಶಾಂ
ತರದ +ಭೂಸುರ+ವರ್ಗವನು +ಸ
ತ್ಕರಿಸಿದನು +ಗೋ +ಭೂಮಿ +ವಸನ +ಹಿರಣ್ಯ+ದಾನದಲಿ
ಪರಿಜನವ +ಪುರಜನವ +ರತ್ನಾ
ಕರಪರೀತ +ಮಹೀ+ಜನವನ್
ಆದರಿಸಿದನು +ವೈಭವವಿಹಿತ +ಸನ್ಮಾನ +ದಾನದಲಿ

ಅಚ್ಚರಿ:
(೧) ಸತ್ಕರಿಸು, ಆದರಿಸು- ಸಾಮ್ಯಾರ್ಥ ಪದ