ಪದ್ಯ ೭: ಹಿರಣ್ಯಕಶಿಪುವಿನ ಮರಣವು ಹೇಗಾಯಿತು?

ಮರಣವೆಂದಿಂಗಾಗದಂತಿರೆ
ವರವಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ್ಮಪದ್ಧತಿಗೆ
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ (ಗದಾ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ಹಿಂದೆ ಹಿರಣ್ಯಕಶಿಪುವು ತನಗೆ ಮರಣವೇ ಸಂಭವಿಸದಂತಹ ವರವನ್ನು ಪಡೆದು ದೇವತೆಗಳು ಮನುಷ್ಯರು ನಾಗರನ್ನು ಹೊಡೆದು ಗೆದ್ದು ಮೆರೆಯುತ್ತಿರಲು, ವಿಷ್ಣುವು ನರಸಿಂಹ ರೂಪದಿಂದ ಅವನ ಮಾಯೆಯನ್ನು ಗೆದ್ದನು.

ಅರ್ಥ:
ಮರಣ: ಸಾವು; ವರ: ಶ್ರೇಷ್ಠ; ಅಸುರ: ರಾಕ್ಷಸ; ಸುರ: ದೇವ; ಉರಗ: ಹಾವು; ವಿಭಾಡಿಸು: ನಾಶಮಾಡು; ಪದ್ಧತಿ: ಹೆಜ್ಜೆಯ ಗುರುತು; ಧರ್ಮ: ಧಾರಣೆ ಮಾಡಿದುದು; ಧರಧುರ: ಆರ್ಭಟ, ಕೋಲಾಹಲ; ಕೇಸರಿ: ಸಿಂಹ; ರೂಪ: ಆಕಾರ; ವಿಶ್ವ: ಜಗತ್ತು; ವಿಶ್ವಂಭರ: ಜಗತ್ತನ್ನು ಕಾಪಾಡುವವನು; ಗೆಲಿದು: ಜಯಿಸು; ಮಾಯೆ: ಗಾರುಡಿ; ಅಭಿಯೋಗ: ಯುದ್ಧ, ಆಕ್ರಮಣ;

ಪದವಿಂಗಡಣೆ:
ಮರಣವ್+ಎಂದಿಂಗ್+ಆಗದಂತಿರೆ
ವರವಕೊಂಡು +ಹಿರಣ್ಯಕ+ಅಸುರ
ಸುರ+ನರ+ಉರಗರನು +ವಿಭಾಡಿಸಿ+ ಧರ್ಮಪದ್ಧತಿಗೆ
ಧರಧುರವ +ಮಾಡಿದಡೆ +ನರಕೇ
ಸರಿಯ +ರೂಪಿನೊಳ್+ಆದಿವಿಶ್ವಂ
ಭರನು +ಗೆಲಿದನು +ಮಾಯೆಯನು +ಮಾಯಾಭಿಯೋಗದಲಿ

ಅಚ್ಚರಿ:
(೧) ವಿಷ್ಣುವನ್ನು ಆದಿವಿಶ್ವಂಭರ ಎಂದು ಕರೆದಿರುವುದು
(೨) ಮೂರುಲೋಕ ಎಂದು ಹೇಳಲು – ಸುರನರೋರಗ ಪದದ ಬಳಕೆ