ಪದ್ಯ ೧೪: ದ್ರೌಪದಿಯು ಪಾಳೆಯದಿಂದ ಹೇಗೆ ಬಂದಳು?

ಪಾಳೆಯದಲಿ ಕುಮಾರರನು ಪಾಂ
ಚಾಲರನು ನೋಡುವೆವೆನುತ ಭೂ
ಪಾಲ ನಡೆತರಲಿದಿರುವಂದುದು ಯುವತಿನಿಕುರುಂಬ
ಸೂಳುವೊಯ್ಲಿನ ತೆಳುವಸುರ ಕರ
ತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ ಬಂದಳು ದ್ರೌಪದೀದೇವಿ (ಗದಾ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಳೆಯದಲ್ಲಿ ಮಲಗಿದ್ದ ಮಕ್ಕಳನ್ನು, ಪಾಂಚಾಲರನ್ನು ನೋಡೋಣವೆಂದು ಧರ್ಮಜನು ಬರುತ್ತಿರಲು, ಮತ್ತೆ ಮತ್ತೆ ಅಳುತ್ತಾ, ತಮ್ಮ ಕೈಗಳಿಂದ ತೆಳುವಾಗಿದ್ದ ಹೊಟ್ಟೆಗಲನ್ನು ಹೊಡೆದುಕೊಳ್ಳುತ್ತಾ ಹಾಹಾಕಾರ ಮಾಡುತ್ತಿದ್ದ ಸ್ತ್ರೀಯರೊಡನೆ ದ್ರೌಪದಿಯು ಎದುರು ಬಂದಳು.

ಅರ್ಥ:
ಪಾಳೆಯ: ಬಿಡಾರ; ಕುಮಾರ: ಮಕ್ಕಳು; ನೋಡು: ವೀಕ್ಷಿಸು; ಭೂಪಾಲ: ರಾಜ; ನಡೆ: ಚಲಿಸು; ಇದಿರು: ಎದುರು; ವಂದುದು: ಬಂದನು; ಯುವತಿ: ಹೆಣ್ಣು; ನಿಕುರುಂಬ: ಸಮೂಹ; ಸೂಳು: ಆರ್ಭಟ, ಬೊಬ್ಬೆ; ಸೂಳುವೊಯಿಲು: ಸರದಿಯಾಗಿ ಕೊಡುವ ಹೊಡೆತ; ತೆಳುವು: ಸೂಕ್ಷ್ಮ; ಕರತಾಳ: ಅಂಗೈ; ಹಾಹಾವಿರಾವ: ಹಾಹಾಕಾರ; ಮೇಳ: ಗುಂಪು; ಗೀತ: ಹಾಡು; ಬಂದು: ಆಗಮಿಸು;

ಪದವಿಂಗಡಣೆ:
ಪಾಳೆಯದಲಿ +ಕುಮಾರರನು +ಪಾಂ
ಚಾಲರನು +ನೋಡುವೆವೆನುತ +ಭೂ
ಪಾಲ +ನಡೆತರಲ್+ಇದಿರು+ಬಂದುದು +ಯುವತಿ+ನಿಕುರುಂಬ
ಸೂಳುವೊಯ್ಲಿನ +ತೆಳುವಸುರ +ಕರ
ತಾಳದಲಿ +ಹಾಹಾವಿರಾವದ
ಮೇಳವದ +ಗೀತದಲಿ +ಬಂದಳು +ದ್ರೌಪದೀದೇವಿ

ಅಚ್ಚರಿ:
(೧) ಅಳಲನ್ನು ವಿವರಿಸುವ ಪರಿ – ಸೂಳುವೊಯ್ಲಿನ ತೆಳುವಸುರ ಕರತಾಳದಲಿ ಹಾಹಾವಿರಾವದ
ಮೇಳವದ ಗೀತದಲಿ