ಮಂಜು ಮುಸುಕಿದೊಡೇನು ಪರ್ವತ
ವಂಜುವುದೆ ಹಾಲಾಹಲವ ನೊಣ
ನೆಂಜಲಿಸುವುದೆ ಬಡಬಶಿಖಿ ನೆನೆವುದೆ ತುಷಾರದಲಿ
ಕಂಜನಾಳದಿ ಕಟ್ಟುವಡೆವುದೆ
ಕುಂಜರನು ನರಶರದ ಜೋಡಿನ
ಜುಂಬುವೊಳೆಯಲಿ ಜಾಹ್ನವೀಧರ ಜಾರುವನೆಯೆಂದ (ಅರಣ್ಯ ಪರ್ವ, ೭ ಸಂಧಿ, ೧೧ ಪದ್ಯ)
ತಾತ್ಪರ್ಯ:
ಮಂಜು ಮುಸುಕಿದರೆ ಪರ್ವತವು ಹೆದರುವುದೇ? ವಿಷವನ್ನು ನೊಣವು ಎಂಜಲು ಮಾಡಲಾದೀತೇ? ಸಮುದ್ರವನ್ನು ಕಾಡನ್ನು ನುಂಗುವ ಕಿಚ್ಚು ತುಂತುರು ಮಳೆಯಿಂದ ಆರೀತೇ? ಕಮಲದ ದಂಟಿನಿಂದ ಆನೆಯನ್ನು ಕಟ್ಟಲಾದೀತೇ? ಅರ್ಜುನನ ಬಾಣಗಳ ತುಂತುರು ಮಳೆಯಿಂದ ಶಿವನು ತೋಯ್ದು ಹೋಗುವನೇ?
ಅರ್ಥ:
ಮಂಜು: ಹಿಮ; ಮುಸುಕು: ಆವರಿಸು; ಪರ್ವತ: ಬೆಟ್ಟ; ಅಂಜು: ಹೆದರು; ಹಾಲಾಹಲ: ವಿಷ, ಗರಲ; ನೊಣ: ಮಕ್ಕಿ, ಮಕ್ಷಿಕ; ಎಂಜಲಿಸು: ತಿನ್ನು; ವಡಬ: ಸಮುದ್ರದಲ್ಲಿರುವ ಬೆಂಕಿ; ಶಿಖಿ: ಬೆಂಕಿ; ನೆನೆ: ತೋಯು, ಒದ್ದೆಯಾಗು; ತುಷಾರ: ಇಬ್ಬನಿ, ಮಂಜು; ಕಂಜ: ತಾವರೆ; ನಾಳ: ದಂಟು; ಕಟ್ಟು: ಬಂಧಿಸು; ಕುಂಜರ: ಆನೆ; ನರ: ಅರ್ಜುನ; ಶರ: ಬಾಣ; ಜೋಡು: ಜೊತೆ, ಕಟ್ಟು; ಜುಂಜು: ತುಂತುರು; ಮಳೆ: ವರ್ಷ; ಜಾಹ್ನವಿ: ಗಂಗೆ ಜಾಹ್ನವೀಧರ: ಶಿವ; ಜಾರು: ನುಣುಚಿಕೊಳ್ಳು, ಮೇಲಿಂದ ಕೆಳಗೆ ಬೀಳು;
ಪದವಿಂಗಡಣೆ:
ಮಂಜು +ಮುಸುಕಿದೊಡೇನು +ಪರ್ವತವ್
ಅಂಜುವುದೆ +ಹಾಲಾಹಲವ+ ನೊಣನ್
ಎಂಜಲಿಸುವುದೆ +ಬಡಬಶಿಖಿ+ ನೆನೆವುದೆ+ ತುಷಾರದಲಿ
ಕಂಜನಾಳದಿ +ಕಟ್ಟುವಡೆವುದೆ
ಕುಂಜರನು+ ನರ+ಶರದ +ಜೋಡಿನ
ಜುಂಬುವೊಳೆಯಲಿ +ಜಾಹ್ನವೀಧರ+ ಜಾರುವನೆಯೆಂದ
ಅಚ್ಚರಿ:
(೧) ಶಿವನನ್ನು ಜಾಹ್ನವೀಧರ ಎಂದು ಕರೆದಿರುವುದು
(೨) ಜ ಕಾರದ ಸಾಲು ಪದಗಳು – ಜೋಡಿನ ಜುಂಬುವೊಳೆಯಲಿ ಜಾಹ್ನವೀಧರ ಜಾರುವನೆಯೆಂದ
(೩) ಉಪಮಾನಗಳ ಪ್ರಯೋಗ – ಮಂಜು ಮುಸುಕಿದೊಡೇನು ಪರ್ವತವಂಜುವುದೆ, ಹಾಲಾಹಲವ ನೊಣನೆಂಜಲಿಸುವುದೆ, ಬಡಬಶಿಖಿ ನೆನೆವುದೆ ತುಷಾರದಲಿ,ಕಂಜನಾಳದಿ ಕಟ್ಟುವಡೆವುದೆ ಕುಂಜರನು