ಪದ್ಯ ೧೧: ಶಿವನು ಅರ್ಜುನನ ಬಾಣಗಳಿಗೆ ಶರಣಾಗುವನೆ?

ಮಂಜು ಮುಸುಕಿದೊಡೇನು ಪರ್ವತ
ವಂಜುವುದೆ ಹಾಲಾಹಲವ ನೊಣ
ನೆಂಜಲಿಸುವುದೆ ಬಡಬಶಿಖಿ ನೆನೆವುದೆ ತುಷಾರದಲಿ
ಕಂಜನಾಳದಿ ಕಟ್ಟುವಡೆವುದೆ
ಕುಂಜರನು ನರಶರದ ಜೋಡಿನ
ಜುಂಬುವೊಳೆಯಲಿ ಜಾಹ್ನವೀಧರ ಜಾರುವನೆಯೆಂದ (ಅರಣ್ಯ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮಂಜು ಮುಸುಕಿದರೆ ಪರ್ವತವು ಹೆದರುವುದೇ? ವಿಷವನ್ನು ನೊಣವು ಎಂಜಲು ಮಾಡಲಾದೀತೇ? ಸಮುದ್ರವನ್ನು ಕಾಡನ್ನು ನುಂಗುವ ಕಿಚ್ಚು ತುಂತುರು ಮಳೆಯಿಂದ ಆರೀತೇ? ಕಮಲದ ದಂಟಿನಿಂದ ಆನೆಯನ್ನು ಕಟ್ಟಲಾದೀತೇ? ಅರ್ಜುನನ ಬಾಣಗಳ ತುಂತುರು ಮಳೆಯಿಂದ ಶಿವನು ತೋಯ್ದು ಹೋಗುವನೇ?

ಅರ್ಥ:
ಮಂಜು: ಹಿಮ; ಮುಸುಕು: ಆವರಿಸು; ಪರ್ವತ: ಬೆಟ್ಟ; ಅಂಜು: ಹೆದರು; ಹಾಲಾಹಲ: ವಿಷ, ಗರಲ; ನೊಣ: ಮಕ್ಕಿ, ಮಕ್ಷಿಕ; ಎಂಜಲಿಸು: ತಿನ್ನು; ವಡಬ: ಸಮುದ್ರದಲ್ಲಿರುವ ಬೆಂಕಿ; ಶಿಖಿ: ಬೆಂಕಿ; ನೆನೆ: ತೋಯು, ಒದ್ದೆಯಾಗು; ತುಷಾರ: ಇಬ್ಬನಿ, ಮಂಜು; ಕಂಜ: ತಾವರೆ; ನಾಳ: ದಂಟು; ಕಟ್ಟು: ಬಂಧಿಸು; ಕುಂಜರ: ಆನೆ; ನರ: ಅರ್ಜುನ; ಶರ: ಬಾಣ; ಜೋಡು: ಜೊತೆ, ಕಟ್ಟು; ಜುಂಜು: ತುಂತುರು; ಮಳೆ: ವರ್ಷ; ಜಾಹ್ನವಿ: ಗಂಗೆ ಜಾಹ್ನವೀಧರ: ಶಿವ; ಜಾರು: ನುಣುಚಿಕೊಳ್ಳು, ಮೇಲಿಂದ ಕೆಳಗೆ ಬೀಳು;

ಪದವಿಂಗಡಣೆ:
ಮಂಜು +ಮುಸುಕಿದೊಡೇನು +ಪರ್ವತವ್
ಅಂಜುವುದೆ +ಹಾಲಾಹಲವ+ ನೊಣನ್
ಎಂಜಲಿಸುವುದೆ +ಬಡಬಶಿಖಿ+ ನೆನೆವುದೆ+ ತುಷಾರದಲಿ
ಕಂಜನಾಳದಿ +ಕಟ್ಟುವಡೆವುದೆ
ಕುಂಜರನು+ ನರ+ಶರದ +ಜೋಡಿನ
ಜುಂಬುವೊಳೆಯಲಿ +ಜಾಹ್ನವೀಧರ+ ಜಾರುವನೆಯೆಂದ

ಅಚ್ಚರಿ:
(೧) ಶಿವನನ್ನು ಜಾಹ್ನವೀಧರ ಎಂದು ಕರೆದಿರುವುದು
(೨) ಜ ಕಾರದ ಸಾಲು ಪದಗಳು – ಜೋಡಿನ ಜುಂಬುವೊಳೆಯಲಿ ಜಾಹ್ನವೀಧರ ಜಾರುವನೆಯೆಂದ
(೩) ಉಪಮಾನಗಳ ಪ್ರಯೋಗ – ಮಂಜು ಮುಸುಕಿದೊಡೇನು ಪರ್ವತವಂಜುವುದೆ, ಹಾಲಾಹಲವ ನೊಣನೆಂಜಲಿಸುವುದೆ, ಬಡಬಶಿಖಿ ನೆನೆವುದೆ ತುಷಾರದಲಿ,ಕಂಜನಾಳದಿ ಕಟ್ಟುವಡೆವುದೆ ಕುಂಜರನು

ಪದ್ಯ ೧೧: ಭೀಮನಿಗೆ ಶ್ರೀಕೃಷ್ಣ ಯಾವ ಚೋದ್ಯದ ನುಡಿಗಳನ್ನು ನುಡಿದನು?

ಎಲೆ ಮಹಾದೇವಾಯ್ತು ಹಾಲಾ
ಹಲ ಸುಧಾರಸ ಉಕ್ಕಿದುರಿಯ
ಗ್ಗಳದ ಶೀತಳವಾಯ್ತು ಸಿಡಿಲಾಟೋಪ ನಯವಾಯ್ತು
ಕೊಳೂಗುಳಕೆ ಪವಮಾನನಂದನ
ನಳುಕಿದನು ಮಝಮಾಯೆ ಕುಂತೀ
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ (ಉದ್ಯೋಗ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನ ಸಂಧಿಯ ಪ್ರಸ್ತಾವನೆಯನ್ನು ಕೇಳಿದ ಕೃಷ್ಣನು ಆಶ್ಚರ್ಯಗೊಂಡು, “ಓಹೋ ಇದೇನಿದು ಶಿವ ಶಿವ ಹಾಲಾಹಲವು ಅಮೃತವಾಯಿತಲ್ಲಾ, ಭಾರಿಯ ಬೆಂಕಿ ಒಮ್ಮೆಲೆ ತಣ್ಣಗಾಯಿತಲ್ಲಾ, ಸಿಡಿಲ ಜೋರು ನಯವಾಯಿತಲ್ಲಾ, ಭೀಮನು ಯುದ್ಧಕ್ಕೆ ಬೆದರಿದನೇ? ಭಲೇ ಮಾಯೆಯಾಟವೇ, ಕುಂತೀದೇವಿಯು ಎಂಥ ಮಕ್ಕಳನ್ನು ಹಡೆದಳು, ಸಾರ್ಥಕವಾಯಿತೆಂದು” ನಸುನಗುತ ನುಡಿದನು

ಅರ್ಥ:
ಮಹಾದೇವ: ಶಿವ; ಹಾಲಾಹಲ: ವಿಷ, ಗರಲ, ನಂಜು; ಸುಧ: ಅಮೃತ; ರಸ: ಸಾರ; ಉಕ್ಕು: ಚಿಮ್ಮು; ಉರಿ: ಬೆಂಕಿ; ಅಗ್ಗ: ಕಡಿಮೆ; ಸಿಡಿಲು: ಅಶನಿ, ಚಿಮ್ಮು, ಗರ್ಜಿಸು; ಶೀತಳ: ತಣ್ಣಗಾಗು; ನಯ: ಮೃದುತ್ವ, ಅಂದ; ಕೊಳುಗುಳ: ಯುದ್ಧ; ನಂದನ: ಮಗ; ಪವಮಾನ: ವಾಯು; ಅಳುಕು: ಹೆದರು; ಮಝ: ಕೊಂಡಾಟದ ಒಂದು ಮಾತು; ಲಲನೆ: ಹೆಣ್ಣು; ಹೆತ್ತು: ಹಡೆ; ಸುತ: ಮಕ್ಕಳು; ಶೌರಿ: ಕೃಷ್ಣ; ನಗು: ಸಂತೋಷ; ಆಟೋಪ:ಆಡಂಬರ;

ಪದವಿಂಗಡಣೆ:
ಎಲೆ+ ಮಹಾದೇವ+ಆಯ್ತು +ಹಾಲಾ
ಹಲ +ಸುಧಾರಸ+ ಉಕ್ಕಿದ್+ಉರಿ
ಅಗ್ಗಳದ +ಶೀತಳವಾಯ್ತು +ಸಿಡಿಲ+ಆಟೋಪ+ ನಯವಾಯ್ತು
ಕೊಳೂಗುಳಕೆ +ಪವಮಾನ+ನಂದನನ್
ಅಳುಕಿದನು +ಮಝಮಾಯೆ +ಕುಂತೀ
ಲಲನೆ +ಹೆತ್ತಳು +ಸುತರನೆಂದನು +ಶೌರಿ +ನಸುನಗುತ

ಅಚ್ಚರಿ:
(೧) ಉಪಮಾನಗಳ ಬಳಕೆ – ಆಯ್ತು ಹಾಲಾಹಲ ಸುಧಾರಸ, ಉಕ್ಕಿದುರಿಯಗ್ಗಳದ ಶೀತಳವಾಯ್ತು, ಸಿಡಿಲಾಟೋಪ ನಯವಾಯ್ತು
(೨) ಭೀಮನು ಬಲಶಾಲಿ ಎಂದು ತಿಳಿದಿದ್ದರು ಅವನ ಬಲವನ್ನೇ ಅಸ್ತ್ರವಾಗಿಸಿ ಅವನನ್ನು ತಿವಿಯುವ ಪರಿ