ಪದ್ಯ ೫೪: ಕಾಮನ ತಾಪವು ಕೀಚಕನನ್ನು ಹೇಗೆ ಆವರಿಸಿತ್ತು?

ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳುಕುಗಳಮಳಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯೊಲಾದುದು ಬಲಿದ ಚಂದ್ರಿಕೆ
ಬೆರಸಿ ಕರಗಿದ ತವರವಾಯಿತು ಕೀಚಕನ ಮನಕೆ (ವಿರಾಟ ಪರ್ವ, ೨ ಸಂಧಿ, ೫೪ ಪದ್ಯ)

ತಾತ್ಪರ್ಯ:
ತಣ್ಣಗಿರಲೆಂದು ಹಾಕಿಕೊಂಡು ವೀಳೆಯದ ಕರ್ಪೂರದ ಹಳುಕುಗಳು ಉರಿಯನ್ನೇ ತಂದವು. ಸುಗಂಧಪೂರಿತವಾದ ಲೇಪನವನ್ನು ಮೈಗೆ ಹಚ್ಚಿದರೆ ಅದು ಸುಟ್ಟು ಕರುಕಲಾಯಿತು. ನೀರಿನ ಪೊಟ್ಟಣವನ್ನು ಕಟ್ಟಿ ಮೈ ಮೇಲೆ ಆಡಿಸಿದರೆ ಉರಿಯಾಯಿತು. ಬಲಿತ ಬೆಳುದಿಂಗಳು ಕರಗಿದ ತವರದಂತೆ ಮೈಸುಟ್ಟಿತು.

ಅರ್ಥ:
ಉರಿ: ತಾಪ; ಒಡಲು: ದೇಹ; ವೀಳೆ: ತಾಂಬೂಲ; ಕರ್ಪುರ: ಸುಗಂಧ ದ್ರವ್ಯ; ಹಳು: ತಗ್ಗಿದುದು; ಅಮಳ: ನಿರ್ಮಲ; ಗಂಧ: ಸುಗಂಧ; ಸರಸ: ಚೆಲ್ಲಾಟ, ವಿನೋದ; ಕರ್ದಮ: ಸುಗಂಧವನ್ನು ಬೆರೆಸಿದ ನೀರು; ಪೂಸು: ಬಳಿಯುವಿಕೆ, ಲೇಪನ; ಅಂಗ: ದೇಹ; ಹೊರಳು: ತಿರುವು, ಬಾಗು; ನೀರು: ಜಲ; ಪೊಟ್ಟಣ: ದೊನ್ನೆ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಬಲಿದ: ಹೆಚ್ಚಾದ; ಚಂದ್ರಿಕೆ: ಬೆಳದಿಂಗಳು; ಬೆರಸು: ಜೊತೆಗೂಡು; ಕರಗು: ಕಡಿಮೆಯಾಗು; ತವರ: ಒಂದು ಬಗೆಯ ಲೋಹ; ಮನ: ಮನಸ್ಸು;

ಪದವಿಂಗಡಣೆ:
ಉರಿದುದ್+ಒಡಲೊಳು +ವೀಳೆಯದ +ಕ
ರ್ಪುರದ +ಹಳುಕುಗಳ್+ಅಮಳ+ಗಂಧದ
ಸರಸ+ ಕರ್ದಮ +ಕರಿಕುವರಿದುದು+ ಪೂಸಿದಂಗದಲಿ
ಹೊರಳೆ +ನೀರಿನ +ಪೊಟ್ಟಣವು +ದ
ಳ್ಳುರಿಯೊಲಾದುದು +ಬಲಿದ +ಚಂದ್ರಿಕೆ
ಬೆರಸಿ+ ಕರಗಿದ+ ತವರವಾಯಿತು +ಕೀಚಕನ+ ಮನಕೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊರಳೆ ನೀರಿನ ಪೊಟ್ಟಣವು ದಳ್ಳುರಿಯೊಲಾದುದು, ಬಲಿದ ಚಂದ್ರಿಕೆ ಬೆರಸಿ ಕರಗಿದ ತವರವಾಯಿತು

ಪದ್ಯ ೨೦: ಭೀಮನು ಹೇಗೆ ಹನುಮನ ಬಾಲವನ್ನು ಎತ್ತಲು ಪ್ರಯತ್ನಿಸಿದನು?

ತೆಗೆದು ನಿಂದನು ಭೀಮ ಹೊಯ್ವ
ಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ
ಡಗೆ ಮರಳೆ ಮರುವಲಗೆ ಗೌಡೊ
ತ್ತುಗಳ ಬಲಿದವಯವದ ಸತ್ರಾ
ಣಿಗಳ ದೇವನು ಠಾವುರಿಯಲೊದಗಿದನು ಬಾಲದಲಿ (ಅರಣ್ಯ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ಹಿಂದಕ್ಕೆ ಸರಿದು ತಾಂಬೂಲವನ್ನೂ, ಪಚ್ಚಕರ್ಪೂರವನ್ನೂ ಬಾಯಿಗೆ ಹಾಕಿಕೊಂಡು ತನ್ನಲ್ಲಾದ ತಲ್ಲಣವನ್ನು ಅಡಗಿಸಿಕೊಂಡನು. ಅವನಲ್ಲಿ ಧಗೆಯು ಮತ್ತೆ ಆವರಿಸಿತು. ಅವನು ಆವುಡೊತ್ತಿ ದೇಹವನ್ನು ಗಟ್ಟಿಮಾಡಿಕೊಂಡು ಠಾವುರಿಯಿಂದ ಬಾಲವನ್ನೆತ್ತಲು ಯತ್ನಿಸಿದನು.

ಅರ್ಥ:
ತೆಗೆ: ಹೊರತರು; ನಿಂದನು: ನಿಲ್ಲು; ಹೊಯ್ವಳ್ಳೆ: ತೇಕುತ್ತಿರುವ ಪಕ್ಕೆಗಳು; ತಲ್ಲಣ: ಅಂಜಿಕೆ, ಭಯ; ಅಡಗು: ಮುಚ್ಚು; ತಾಳಿಗೆ: ಗಂಟಲು; ಕವಳ: ಊಟ; ನೂಕು: ತಳ್ಳು; ಕರ್ಪುರ: ಹಳುಕು: ಚೂರು; ಡಗೆ: ಸೆಕೆ, ಕಾವು; ಮರಳು: ಹಿಂದಿರುಗು; ಮರು: ಮುಂದಿನ; ಗೌಡೊತ್ತು: ಜೋರಾಗಿ ಸರಿಸು; ಬಲಿದ: ಗಟ್ಟಿ; ಅವಯವ: ದೇಹದ ಒಂದು ಭಾಗ, ಅಂಗ; ಸತ್ರಾಣಿ: ಬಲಶಾಲಿ; ದೇವ: ಸುರ; ಠಾವುರಿ: ಒಂದು ಪಟ್ಟು; ಒದಗು: ಲಭ್ಯ, ದೊರೆತುದು; ಬಾಲ: ಪುಚ್ಛ;

ಪದವಿಂಗಡಣೆ:
ತೆಗೆದು+ ನಿಂದನು +ಭೀಮ +ಹೊಯ್ವ
ಳ್ಳೆಗಳ +ತಲ್ಲಣವ್+ಅಡಗಲ್+ಒಳ +ತಾ
ಳಿಗೆಗೆ +ಕವಳವ +ನೂಕಿದನು +ಕರ್ಪುರದ+ ಹಳುಕುಗಳ
ಡಗೆ+ ಮರಳೆ+ ಮರುವಲಗೆ+ ಗೌಡೊ
ತ್ತುಗಳ+ ಬಲಿದ್+ಅವಯವದ +ಸತ್ರಾ
ಣಿಗಳ +ದೇವನು +ಠಾವುರಿಯಲ್+ಒದಗಿದನು +ಬಾಲದಲಿ

ಅಚ್ಚರಿ:
(೧) ಭೀಮನನ್ನು ಸತ್ರಾಣಿಗಳ ದೇವನು ಎಂದು ಕರೆದಿರುವುದು
(೨) ತಿನ್ನುವುದನ್ನು ಚಿತ್ರಿಸಿರುವ ಪರಿ – ಭೀಮ ಹೊಯ್ವಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ

ಪದ್ಯ ೪: ಕರ್ಣನ ಪ್ರತಾಪವು ಹೇಗೆ ಹೆಚ್ಚಿತು?

ತೊಳಗಿ ಬೆಳಗುವ ಶಿರದ ಪಚ್ಚೆಯ
ಹಳುಕು ಬೆರಸಿದ ವೀಳೆಯವನಿ
ಕ್ಕೆಲದ ಶಲ್ಯಾದಿಗಳಿಗಿತ್ತನು ವರರಥಾಗ್ರದಲಿ
ಕಳಚಿ ತೆಗೆದನು ಜೋಡ ಮೈವೆ
ಗ್ಗಳಿಸಿ ದಳವೇರಿದುದು ಮನ ಮೊಗ
ಥಳಥಳಿಸೆ ಬಹಳಪ್ರತಾಪದಲಿದರ್ನಾ ಕರ್ಣ (ಕರ್ಣ ಪರ್ವ, ೨೧ ಸಂಧಿ, ೪ ಪದ್ಯ)

ತಾತ್ಪರ್ಯ:
ಕರ್ಣನು ರಥದಲ್ಲಿ ಕುಳಿತು ಪಚ್ಚಕರ್ಪೂರದ ವೀಳೆಯವನ್ನು ಉಡುಗೊರೆಯಾಗಿ ಶಲ್ಯ ಮೊದಲಾದವರಿಗೆ ಕೊಟ್ಟನು ತನ್ನ ಕವಚವನ್ನು ತೆಗೆದಿಟ್ತುಬಿಟ್ಟನು. ಮೈಪ್ರತಾಪದಿಂದ ಹೆಚ್ಚಿತು. ಮನಸ್ಸು ಉಲ್ಲಾಸ ಭರಿತವಾಯಿತು. ಮುಖವು ಕಾಂತಿಯಿಂದ ಹೊಳೆಯಿತು. ಕರ್ಣನ ಪ್ರತಾಪ ಹೆಚ್ಚಿತು.

ಅರ್ಥ:
ತೊಳಗು: ಹೊಳೆ, ಕಾಂತಿ; ಬೆಳಗು: ಹೊಳೆ; ಶಿರ: ತಲೆ; ಪಚ್ಚೆ: ಕರ್ಪೂರ; ಹಳುಕು: ಚೂರು; ಬೆರಸು: ಕಲಿಸು; ವೀಳೆ: ತಾಂಬೂಲ; ಇಕ್ಕೆಲ: ಎರಡೂ ಕಡೆ; ಆದಿ: ಮುಂತಾದವರು; ವರ: ಶ್ರೇಷ್ಠ; ರಥ: ಬಂಡಿ; ಅಗ್ರ: ಮುಂದೆ; ಕಳಚು: ತೆಗೆ, ಬಿಚ್ಚು; ತೆಗೆ: ಹೊರತರು; ಜೋಡು: ಜೊತೆ; ಮೈ: ತನು; ವೆಗ್ಗಳ: ಹೆಚ್ಚು, ಆಧಿಕ್ಯ; ದಳ: ಸೈನ್ಯ; ಏರು: ಹತ್ತು; ಮನ: ಮನಸ್ಸು; ಮೊಗ: ಮುಖ; ಥಳಥಳ: ಹೊಳೆ; ಬಹಳ: ತುಂಬ; ಪ್ರತಾಪ: ಪರಾಕ್ರಮ;

ಪದವಿಂಗಡಣೆ:
ತೊಳಗಿ +ಬೆಳಗುವ +ಶಿರದ +ಪಚ್ಚೆಯ
ಹಳುಕು +ಬೆರಸಿದ+ ವೀಳೆಯವನ್
ಇಕ್ಕೆಲದ +ಶಲ್ಯಾದಿಗಳಿಗ್+ಇತ್ತನು +ವರ+ರಥಾಗ್ರದಲಿ
ಕಳಚಿ +ತೆಗೆದನು +ಜೋಡ +ಮೈವೆ
ಗ್ಗಳಿಸಿ+ ದಳವೇರಿದುದು +ಮನ +ಮೊಗ
ಥಳಥಳಿಸೆ+ ಬಹಳ+ಪ್ರತಾಪದಲ್+ಇದರ್ನಾ +ಕರ್ಣ