ಎನಲು ಖತಿ ಬಿಗುಹೇರಿ ಹಲುಹಲು
ದಿನುತ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಝರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು (ವಿರಾಟ ಪರ್ವ, ೧೦ ಸಂಧಿ, ೧೯ ಪದ್ಯ)
ತಾತ್ಪರ್ಯ:
ಕಂಕನು ಹೀಗೆಂದು ಹೇಳಲು, ವಿರಾಟನಿಗೆ ಮಹಾಕೋಪವುಂಟಾಯಿತು. ತನ್ನ ಹಲ್ಲುಕಡಿದು, ಕಣ್ಣಿನಲ್ಲಿ ಉರಿಯುಗುಳುತ್ತಾ, ತುಟಿಯನ್ನು ಕಡಿದು, ಬಂಗಾರದ ಪಗಡೆಯಾಟದ ಕಾಯಿಯಿಂದ ಯುಧಿಷ್ಠಿರನ ಹಣೆಯೊಡೆಯುವಂತೆ ಹೊಡೆಯಲು, ಜಾಜಿಯ ಬೆಟ್ಟದ ನೀರಿನೊರತೆಯಂತೆ ಕೆಂಪಾದ ರಕ್ತದ ಧಾರೆಯು ಹರಿಯಿತು.
ಅರ್ಥ:
ಖತಿ: ಕೋಪ; ಬಿಗುಹೇರು: ಬಿಗಿತ ಹೆಚ್ಚಿ; ಹಲು: ಹಲ್ಲು; ಕಂಗಳು: ನಯನ; ಉರಿ: ಬೆಂಕಿ; ಉಗುಳು: ಹೊರಹಾಕು; ಕನಲು: ಸಿಟ್ಟಿಗೇಳು; ಬಿಗಿ: ಕಟ್ಟು, ಬಂಧಿಸು; ಔಡು: ಹಲ್ಲಿನಿಂದ ಕಚ್ಚು; ಒತ್ತು: ಚುಚ್ಚು; ಕನಕ: ಚಿನ್ನ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ನೆಗಹು: ಮೇಲೆತ್ತು; ಜನಪತಿ: ರಾಜ; ಹಣೆ: ಲಲಾಟ; ಒಡೆ: ಸೀಳು; ಜಾಜಿ: ಕೆಂಪುಬಣ್ಣ, ಮಾಲತಿ ಹೂವು; ಗಿರಿ: ಬೆಟ್ಟ; ನಿರ್ಝರ: ಬೆಟ್ಟದ ಹೊಳೆ; ರುಧಿರ: ರಕ್ತ; ಧಾರೆ: ಝರಿ; ಸಿಡಿ: ಚಿಮ್ಮು; ಶಿರ: ತಲೆ; ಸೆಲೆ: ಶಬ್ದ, ಧ್ವನಿ;
ಪದವಿಂಗಡಣೆ:
ಎನಲು+ ಖತಿ+ ಬಿಗುಹೇರಿ +ಹಲುಹಲು
ದಿನುತ +ಕಂಗಳಲ್+ಉರಿಯನುಗುಳುತ
ಕನಲಿ +ಬಿಗಿದ್+ಔಡೊತ್ತಿ +ಕನಕದ +ಸಾರಿಯನು +ನೆಗಹಿ
ಜನಪತಿಯ +ಹಣೆಯೊಡೆಯಲಿಡೆ +ಜಾ
ಜಿನ +ಗಿರಿಯ +ನಿರ್ಝರದವೊಲು+ ಭೋಂ
ಕೆನಲು +ರುಧಿರದ+ ಧಾರೆ +ಸಿಡಿದುದು +ಶಿರದ +ಸೆಲೆಯೊಡೆದು
ಅಚ್ಚರಿ:
(೧) ರಕ್ತದ ತೀವ್ರತೆಯನ್ನು ಹೇಳುವ ಪರಿ – ಜಾಜಿನ ಗಿರಿಯ ನಿರ್ಝರದವೊಲು ಭೋಂಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು