ಸೋತನೈ ಹರಿಯೆಂದು ಚೈದ್ಯನ
ಬೂತುಗಳು ಬಣ್ಣಿಸಿದರೀ ನಿ
ರ್ಭೀತ ಯಾದವ ಸೈನ್ಯವಿದ್ದುದು ಹರ್ಷಕೇಳಿಯಲಿ
ಈತ ರಾವಣ ಮುನ್ನ ಭುವನ
ಖ್ಯಾತನೆಂದಮರರು ವಿಮಾನ
ವ್ರಾತದಲಿ ನೆರೆ ನೋಡುತಿರ್ದುದು ಸಮರ ಸಂಭ್ರಮವ (ಸಭಾ ಪರ್ವ, ೧೧ ಸಂಧಿ, ೬೯ ಪದ್ಯ)
ತಾತ್ಪರ್ಯ:
ಶಿಶುಪಾಲನ ಜೊತೆಯಲ್ಲಿದ್ದ ಭಂಡ ಜನರು ಶ್ರೀಕೃಷ್ಣನು ಸೋತ ಎಂಬ ಭಂಡತನದ ಮಾತನ್ನಾಡಿದರು. ಯಾದವ ಸೈನ್ಯವು ಇಬ್ಬರ ಕಾಳಗವನ್ನು ಸಂತೋಷದ ವೀಕ್ಷಿಸುತ್ತಿತ್ತು. ಶಿಶುಪಾಲನು ಹಿಂದೆ ಭೂಮಿಯಲ್ಲಿ ಪ್ರಸಿದ್ಧನಾದ ರಾವಣನಾಗಿದ್ದವ, ಇವನ ಕಾಳಗವನ್ನು ನೋಡೋಣ ಎಂದು ಆಕಾಶದಲ್ಲಿ ದೇವತೆಗಳು ವಿಮಾನದಲ್ಲಿ ಕುಳಿತು ನೋಡುತ್ತಿದ್ದರು.
ಅರ್ಥ:
ಸೋತು: ಪರಾಭವ; ಹರಿ: ಕೃಷ್ಣ; ಚೈದ್ಯ: ಶಿಶುಪಾಲ; ಬೂತು:ಭಂಡ; ಬಣ್ಣಿಸು: ವರ್ಣಿಸು; ನಿರ್ಭೀತ: ಭಯವಿಲ್ಲದ; ಸೈನ್ಯ: ಪಡೆ; ಹರ್ಷ: ಸಂತೋಷ; ಕೇಳಿ: ವಿನೋದ, ಕ್ರೀಡೆ; ಮುನ್ನ: ಹಿಂದೆ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಅಮರ: ದೇವತೆ; ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ವ್ರಾತ: ಗುಂಪು; ನೆರೆ: ಜೊತೆಗೂಡು; ನೋಡು: ವೀಕ್ಷಿಸು; ಸಮರ: ಯುದ್ಧ; ಸಂಭ್ರಮ: ಉತ್ಸಾಹ, ಸಡಗರ;
ಪದವಿಂಗಡಣೆ:
ಸೋತನೈ +ಹರಿಯೆಂದು +ಚೈದ್ಯನ
ಬೂತುಗಳು+ ಬಣ್ಣಿಸಿದರ್+ಈ+ ನಿ
ರ್ಭೀತ +ಯಾದವ +ಸೈನ್ಯವಿದ್ದುದು +ಹರ್ಷ+ಕೇಳಿಯಲಿ
ಈತ+ ರಾವಣ+ ಮುನ್ನ +ಭುವನ
ಖ್ಯಾತನೆಂದ್+ಅಮರರು +ವಿಮಾನ
ವ್ರಾತದಲಿ +ನೆರೆ +ನೋಡುತಿರ್ದುದು +ಸಮರ +ಸಂಭ್ರಮವ
ಅಚ್ಚರಿ:
(೧) ಜೋಡಿ ಪದಗಳಾಕ್ಷರ – ವಿಮಾನ ವ್ರಾತದಲಿ; ನೆರೆ ನೋಡುತಿರ್ದುದು; ಸಮರ ಸಂಭ್ರಮವ