ಒಳ್ಳಿತೈ ಕೈಚಳಕವಾವನ
ಲಿಲ್ಲ ಹರಹರ ಪರಶುರಾಮನ
ನಲ್ಲಿ ಮೆಚ್ಚಿಸಿದಂದವಿನಿತೋ ಮತ್ತೆ ಬೇರುಂಟೊ
ಒಳ್ಳೆಗರನೋಡಿಸಿದ ಸಹಸವ
ನಿಲ್ಲಿ ತೋರಲು ನೆನೆದಿರೇ ತ
ಪ್ಪಲ್ಲ ತಪ್ಪಲ್ಲೆನುತ ಕಣೆಗಳ ಕಡಿದನಾ ಪಾರ್ಥ (ಭೀಷ್ಮ ಪರ್ವ, ೯ ಸಂಧಿ, ೩೪ ಪದ್ಯ)
ತಾತ್ಪರ್ಯ:
ಒಳ್ಳೆಯದು ಕೈಚಳಕ ಯಾರಲ್ಲಿಲ್ಲ, ಶಿವ ಶಿವಾ ಇಂತಹ ಬಾಣಪ್ರಯೋಗದಿಂದಲೇ ಪರಶುರಾಮರನ್ನು ಮೆಚ್ಚಿಸಿದಿರೋ? ಬೇರೆ ಯಾವುದಾದರೂ ಇತ್ತೋ? ನೀರು ಹಾವಿನಂತಹ ಚತುರಂಗ ಸೈನ್ಯದವರನ್ನೋಡಿಸಿದ ಚಾತುರ್ಯವನ್ನು ನನಗೆ ತೋರಿಸಬೇಕೆಂದುಕೊಂಡಿರಾ? ತಪ್ಪಲ್ಲ ತಪ್ಪಲ್ಲ ಎನ್ನುತ್ತಾ ಅರ್ಜುನನು ಭೀಷ್ಮನ ಬಾಣಗಳನ್ನು ಕಡಿದನು.
ಅರ್ಥ:
ಒಳ್ಳಿತು: ಒಳ್ಳೆಯದು, ಸಮಂಜಸ; ಕೈಚಳಕ: ಚಾಣಾಕ್ಷತೆ; ಹರಹರ: ಮಹಾದೇವ; ಮೆಚ್ಚಿಸು: ಒಡಂಬಡಿಸು, ಒಪ್ಪಿಸು; ಅಂದ: ಸೊಬಗು; ಬೇರೆ: ಅನ್ಯ; ಒಳ್ಳೆ: ನೀರು ಹಾವು; ಓಡಿಸು: ಧಾವಿಸು; ನೆನೆ: ಜ್ಞಾಪಿಸು; ತಪ್ಪು: ಸರಿಯಲ್ಲದು; ಕಣೆ: ಬಾಣ; ಕಡಿ: ಸೀಳು;
ಪದವಿಂಗಡಣೆ:
ಒಳ್ಳಿತೈ +ಕೈಚಳಕವ್+ಆವನಲ್
ಇಲ್ಲ +ಹರಹರ+ ಪರಶುರಾಮನ
ನಲ್ಲಿ +ಮೆಚ್ಚಿಸಿದ್+ಅಂದವ್+ಇನಿತೋ +ಮತ್ತೆ +ಬೇರುಂಟೊ
ಒಳ್ಳೆಗರನೋಡಿಸಿದ+ ಸಹಸವನ್
ಇಲ್ಲಿ +ತೋರಲು +ನೆನೆದಿರೇ+ ತ
ಪ್ಪಲ್ಲ +ತಪ್ಪಲ್ಲೆನುತ +ಕಣೆಗಳ+ ಕಡಿದನಾ +ಪಾರ್ಥ
ಅಚ್ಚರಿ:
(೧) ರೂಪಕದ ಪ್ರಯೋಗ – ಒಳ್ಳೆಗರನೋಡಿಸಿದ ಸಹಸವನಿಲ್ಲಿ ತೋರಲು ನೆನೆದಿರೇ