ಪದ್ಯ ೨೬: ಸಂಜಯನು ಯಾವ ಪ್ರಶ್ನೆಯನ್ನು ದುರ್ಯೋಧನನಿಗೆ ಕೇಳಿದನು?

ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕುಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ (ಗದಾ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲೈ ಕೌರವೇಶ್ವರ, ನಿನ್ನ ತಾಯಿ ಗಾಂಧಾರಿಯು ನನ್ನನ್ನು ಕಂಡು, ಎಲೈ ಸಂಜಯ ದುರ್ಯೋಧನನು ಏನು ಮಾಡಿದ? ಕುಂತಿಯ ಮಕ್ಕಳಲ್ಲಿ ಯಾರು ಅಳಿದರು, ಯಾರು ಉಳಿದರು? ನಮ್ಮ ಸೇನೆಯಲ್ಲಿ ಯಾರು ಉಳಿದಿದ್ದಾರೆ? ಶಕುನಿಯು ಯುದ್ಧದಲ್ಲಿ ಏನು ಮಾಡಿದೆ ಎಂದು ಕೇಳಿದರೆ ಯುದ್ಧದ ವಾರ್ತೆಯನ್ನು ನಾನು ಏನೆಂದು ಹೇಳಲಿ ಎಂದು ಕೌರವನನ್ನು ಪ್ರಶ್ನಿಸಿದ.

ಅರ್ಥ:
ಸೂನು: ಮಕ್ಕಳು; ಅಳಿ: ಸಾವು; ಉಳಿ: ಜೀವಿಸು; ಥಟ್ಟು: ಗುಂಪು; ಹದ: ಸ್ಥಿತಿ; ರಣ: ಯುದ್ಧ; ಬೆಸ:ಅಪ್ಪಣೆ, ಆದೇಶ; ತಾಯಿ: ಮಾತೆ; ಉತ್ಸವ: ಸಂಭ್ರಮ;

ಪದವಿಂಗಡಣೆ:
ಏನು +ಸಂಜಯ +ಕೌರವೇಶ್ವರನ್
ಏನ+ ಮಾಡಿದನಲ್ಲಿ +ಕುಂತೀ
ಸೂನುಗಳೊಳ್+ಆರ್+ಅಳಿದರ್+ಉಳಿದರು +ನಮ್ಮ ಥಟ್ಟಿನಲಿ
ಏನು +ಹದನೈ+ ಶಕುನಿ+ ರಣದೊಳಗ್
ಏನ +ಮಾಡಿದನೆಂದು +ಬೆಸಗೊಳಲ್
ಏನನೆಂಬೆನು +ತಾಯಿ +ಗಾಂಧಾರಿಗೆ +ರಣೋತ್ಸವವ

ಅಚ್ಚರಿ:
(೧) ಅಳಿ, ಉಳಿ – ವಿರುದ್ಧಾರ್ಥಕ ಪದ
(೨) ಏನು, ಏನ ಪದದ ಬಳಕೆ ಎಲ್ಲಾ ಸಾಲುಗಳ ಮೊದಲ ಪದ (೩ ಸಾಲು ಹೊರತುಪಡಿಸಿ)