ಪದ್ಯ ೫೪: ಭೀಮನ ಗದ್ದಲಕ್ಕೆ ಪಕ್ಷಿಗಳೇನು ಮಾಡಿದವು?

ಹಾರಿದವು ಹಂಸೆಗಳು ತುದಿಮರ
ಸೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳ್ದವು ಜಕ್ಕವಕ್ಕಿಗಳು
ಚೀರಿದವು ಕೊಳರ್ವಕ್ಕಿ ದಳದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ (ಅರಣ್ಯ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನ ಕೋಲಾಹಲಕ್ಕೆ ಹಂಸಗಳು ಹಾರಿ ಹೋದವು. ನವಿಲುಗಳು ಮರದ ತುದಿಗಳನ್ನು ಏರಿದವು. ಚಕ್ರವಾಕ ಪಕ್ಷಿಗಳು ಕೊಕ್ಕುಗಳನ್ನು ನೀರಲ್ಲಿ ಮೂರಿ ಮುಳುಗಿ ಏಳುತ್ತಿದ್ದವು. ಸರೋವರದ ಪಕ್ಷಿಗಳು ಚೀರಿದವು. ತಾವರೆಯೆಲೆಗಳ ಮರೆಯಲ್ಲಿ ದುಂಬಿಗಳು ಅಡಗಿದವು.

ಅರ್ಥ:
ಹಾರು: ಲಂಘಿಸು; ಹಂಸ: ಮರಾಲ; ತುದಿ: ಅಗ್ರಭಾಗ; ಮರ: ತರು; ಸೇರು: ತಲುಪು, ಮುಟ್ಟು; ನವಿಲು: ಮಯೂರ, ಶಿಖಿ; ತುಂಡ: ಮುಖ, ಆನನ; ಊರು: ನೆಲೆಸು; ನೀರು: ಜಲ; ಮುಳುಗು: ನೀರಿನಲ್ಲಿ ಮೀಯು; ಮರಳು: ಹಿಂದಿರುಗು; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಚೀರು: ಜೋರಾಗಿ ಕೂಗು; ಕೊಳ: ಹೊಂಡ, ಸರೋವರ; ದಳ: ಗುಂಪು; ಜಾರು: ಕೆಳಗೆ ಬೀಳು; ತಾವರೆ: ಕಮಲ; ಎಲೆ: ಪರ್ಣ; ಮರೆ: ಗುಟ್ಟು, ರಹಸ್ಯ; ಆರಡಿ: ಆರು ಕಾಲುಗಳುಳ್ಳ ಕೀಟ, ದುಂಬಿ; ಅಡಗು: ಬಚ್ಚಿಟ್ಟುಕೊಳ್ಳು; ಕೋಳಾಹಲ: ಗದ್ದಲ; ಪವನಜ: ಭೀಮ;

ಪದವಿಂಗಡಣೆ:
ಹಾರಿದವು +ಹಂಸೆಗಳು +ತುದಿಮರ
ಸೇರಿದವು +ನವಿಲುಗಳು +ತುಂಡವನ್
ಊರಿ+ ನೀರೊಳು +ಮುಳುಗಿ +ಮರಳ್ದವು+ ಜಕ್ಕವಕ್ಕಿಗಳು
ಚೀರಿದವು +ಕೊಳರ್ವಕ್ಕಿ+ ದಳದಲಿ
ಜಾರಿ +ತಾವರೆ+ಎಲೆಯ +ಮರೆಗಳಲ್
ಆರಡಿಗಳ್+ಅಡಗಿದವು +ಕೋಳಾಹಳಕೆ +ಪವನಜನ

ಅಚ್ಚರಿ:
(೧) ದುಂಬಿಗಳನ್ನು ಚಿತ್ರಿಸಿದ ಪರಿ – ದಳದಲಿಜಾರಿ ತಾವರೆಯೆಲೆಯ ಮರೆಗಳ ಲಾರಡಿಗಳಡಗಿದವು

ಪದ್ಯ ೧೧: ಊರ್ವಶಿಯ ಸ್ನೇಹಿತೆಯರ ಬಳಿ ಯಾರು ಬಂದರು?

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರ ಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ (ಅರಣ್ಯ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಊರ್ವಶಿಯ ಕೆಳದಿಯರ ಮೆಲುನುಡಿಗಳನ್ನು ಕೇಳಿ, ಗಿಣಿಗಳು ಅವರ ಬಳಿಗೆ ಬಂದವು, ಅವರ ಸಂಗೀತವನ್ನು ಕೇಳಿ ಕೋಗಿಲೆಗಳು ಹತ್ತಿರಕ್ಕೆ ಬಂದವು, ಅವರ ಅಂಗದ ಪರಿಮಳವನ್ನು ಮೂಸಿ ದುಂಬಿಗಳ ಹಿಂಡುಗಳು ಅವರ ಹತ್ತಿರಕ್ಕೆ ಬಂದವು, ಅವರ ಹೊಳೆಯುವ ಮುಖಗಳನ್ನು ನೋಡಿ ಚಂದ್ರ ಬಂದನೆಂದು ಚಕೋರ ಪಕ್ಷಿಗಳು ಹಾರಿ ಬಂದವು, ಅವರ ಕಾಲಂದುಗೆಯ ಸದ್ದಿಗೆ ಹಂಸಗಳು ಊರ್ವಶಿಯ ಸ್ನೇಹಿತೆಯರ ಬಳಿ ಬಂದವು.

ಅರ್ಥ:
ಮೆಲುನುಡಿ: ಮೃದು ವಚನ; ಗಿಣಿ: ಶುಕ; ಹೊದ್ದು: ಹೊಂದು, ಸೇರು; ಸರ: ಸ್ವರ, ದನಿ; ಉಲಿ: ಧ್ವನಿಮಾಡು, ಕೂಗು; ಔಕು: ಗುಂಪು, ಒತ್ತು; ಪರಿಮಳ: ಸುಗಂಧ; ಪಸರು: ಹರಡು; ತೂಳು: ಬೆನ್ನಟ್ಟು, ಹಿಂಬಾಲಿಸು; ತುಂಬಿ: ದುಂಬಿ, ಜೀನು; ಡೊಂಬಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಮುಖ: ಆನನ; ಚಕೋರ: ಚಾತಕ ಪಕ್ಷಿ; ಚಯ: ಕಾಂತಿ; ಇಟ್ಟಳಿಸು: ದಟ್ಟವಾಗು, ಒತ್ತಾಗು; ನೇವುರ: ಅಂದುಗೆ, ನೂಪುರ; ಬೊಬ್ಬೆ: ಜೋರಾದ ಶಬ್ದ; ಸಿಲುಕು: ಬಂಧನಕ್ಕೊಳಗಾಗು; ಹಂಸ: ಮರಾಲ; ಕಮಲಾನನೆ: ಕಮಲದಂತ ಮುಖ; ಕೆಳದಿ: ಗೆಳತಿ, ಸ್ನೇಹಿತೆ;

ಪದವಿಂಗಡಣೆ:
ಮೆಲು+ನುಡಿಗೆ+ ಗಿಣಿ +ಹೊದ್ದಿದವು +ಸರದ್
ಉಲಿಗೆ+ ಕೋಗಿಲೆ+ಔಕಿದವು+ ಪರಿ
ಮಳದ +ಪಸರಕೆ+ ತೂಳಿದವು +ತುಂಬಿಗಳು+ ಡೊಂಬಿಯಲಿ
ಹೊಳೆವ +ಮುಖಕೆ +ಚಕೋರ +ಚಯವಿ
ಟ್ಟಳಿಸಿದವು ನೇವುರದ +ಬೊಬ್ಬೆಗೆ
ಸಿಲುಕಿದವು +ಹಂಸೆಗಳು+ ಕಮಲಾನನೆಯ+ ಕೆಳದಿಯರ

ಅಚ್ಚರಿ:
(೧) ಹೊದ್ದಿದವು, ಔಕಿದವು, ತೂಳಿದವು, ವಿಟ್ಟಳಿಸಿದವು, ಸಿಲುಕಿದವು – ಪದಗಳ ಬಳಕೆ
(೨) ಗಿಣಿ, ಕೋಗಿಲೆ, ತುಂಬಿ, ಚಕೋರ , ಹಂಸೆ – ಉಪಮಾನಕ್ಕೆ ಬಳಸಿದುದು

ಪದ್ಯ ೧೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೪?

ಅಕಟ ಹಂಸೆಯ ಮರಿಯ ಮೋದುವ
ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕದ ಮಾಣಿಸೈ ವಾಣಿಯವೆ ಭಕುತರಲಿ
ಪ್ರಕಟಭೂತಗ್ರಹದ ಬಾಧೆಗೆ
ವಿಕಳೆ ನಿನ್ನಯ ಬಿರುದ ತಡೆದೆನು
ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೫ ಪದ್ಯ)

ತಾತ್ಪರ್ಯ:
ಅಯ್ಯೋ ಕೃಷ್ಣ, ಹಂಸದ ಮರಿಯನ್ನು ಕುಕ್ಕುವ ಕೊಕ್ಕರೆಯನ್ನು ತೊಲಗಿಸು, ಗಿಡುಗನಿಂದ ಗಿಳಿಯನ್ನು ಸಂರಕ್ಷಿಸು, ಭಕ್ತರನ್ನು ಕಾಪಾಡುವೆ ಎಂದು ನೀನು ನುಡಿದಿಲ್ಲವೇ ಅದು ನಿನ್ನ ಕರ್ತವ್ಯ ವಲ್ಲವೇ, ಭೂತವು ಹಿಡಿದು ಬಾಧಿಸುತ್ತಿರುವುದರಿಂದ ನಿನ್ನ ಬಿರುದನ್ನು ನಿನಗೇ ತಿಳಿಸುತ್ತಿದ್ದೇನೆ, ಭಕ್ತವತ್ಸಲನೇ ಆಗಿದ್ದರೆ ನನ್ನನ್ನು ರಕ್ಷಿಸು ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಅಕಟ: ಅಯ್ಯೋ; ಹಂಸ: ಮರಾಲ, ಬಿಳಿಯ ಪಕ್ಷಿ; ಮರಿ: ಶಿಶು; ಮೋದು: ಹೊಡೆ, ಅಪ್ಪಳಿಸು; ಬಕ: ಕೊಕ್ಕರೆ; ತೆಗೆ: ಹೋಗಲಾಡಿಸು; ಗಿಡುಗ: ಹದ್ದು; ಎರಗು: ಬೀಳು; ಶುಕ: ಗಿಳಿ; ಶೋಕ: ದುಃಖ; ಮಾಣಿಸು: ನಿಲ್ಲುವಂತೆ ಮಾಡು; ವಾಣಿ: ಮಾತು; ಭಕುತ: ಆರಾಧಕ; ಪ್ರಕಟ: ಸ್ಪಷ್ಟವಾದುದು, ಕಾಣುವಿಕೆ; ಭೂತ: ದೆವ್ವ, ಪಿಶಾಚಿ; ಬಾಧೆ: ತೊಂದರೆ; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಬಿರುದು: ಪದವಿ, ಪಟ್ಟ; ತಡೆ: ನಿಲ್ಲಿಸು; ವತ್ಸಲ: ಪ್ರೀತಿಸುವ; ಅಹರು: ಆಗುವರು; ಸಲಹು: ಕಾಪಾಡು; ಒರಲು: ಗೋಳಿಡು, ಕೂಗು; ತರಳೆ: ಯುವತಿ;

ಪದವಿಂಗಡಣೆ:
ಅಕಟ +ಹಂಸೆಯ +ಮರಿಯ +ಮೋದುವ
ಬಕನ+ ತೆಗೆಸೈ+ ಗಿಡುಗನ್+ಎರಗುವ
ಶುಕನ+ ಶೋಕದ+ ಮಾಣಿಸೈ+ ವಾಣಿಯವೆ+ ಭಕುತರಲಿ
ಪ್ರಕಟ+ಭೂತಗ್ರಹದ+ ಬಾಧೆಗೆ
ವಿಕಳೆ+ ನಿನ್ನಯ+ ಬಿರುದ+ ತಡೆದೆನು
ಭಕುತ+ವತ್ಸಲನ್+ಅಹರೆ+ ಸಲಹೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹಂಸೆಯ ಮರಿಯ ಮೋದುವ ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕದ ಮಾಣಿಸೈ

ಪದ್ಯ ೨೭: ಕರ್ಣನದು ಯಾವ ಪೌರುಷವೆಂದು ಶಲ್ಯ ಮೂದಲಿಸಿದನು?

ಜಲಧಿ ಗಹನವೆ ನಿನ್ನೊಡನೆ ಹೊ
ಕ್ಕಳವಿಗೊದಗುವೆನೆಂದು ವಾಯಸ
ಕಳಿನುಡಿದು ಹಾರಿತ್ತು ಹಂಸೆಯ ಕೂಡೆ ಗಗನದಲಿ
ಬಳಿಕ ತಲೆಕೆಳಗಾಗಿ ಸಾಗರ
ದೊಳಗೆ ಬಿದ್ದುದು ಹಂಸೆ ತಂದಿಳೆ
ಗಿಳುಹಿತಾ ಪರಿ ಕಾಕಪೌರುಷ ಕರ್ಣ ನೀನೆಂದ (ಕರ್ಣ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಒಂದು ಸೊಕ್ಕಿನ ಕಾಗೆ ಸಾಗರವನ್ನು ನಾನು ಹಾರಲಾಗದವನೇ ಎಂದು ಜಂಬಪಟ್ಟು ಹಂಸದೊಡನೆ ನಿನ್ನೊಡನೆ ಇದನ್ನು ನಾನು ಹಾರುತ್ತೇನೆ ಎಂದು ಪಂಥ ಕಟ್ಟಿ ಅದರೊಡನೆ ಆಕಾಶದಲ್ಲಿ ಹಾರಿತು, ಸ್ವಲ್ಪ ದೂರ ಹೋದ ಮೇಲೆ ಕಾಗೆಯು ಹಾರಲಾಗದೆ ತಲೆಕೆಳಗಾಗಿ ನೀರಿನಲ್ಲಿ ಬಿದ್ದಿತು. ಹಂಸವು ಆ ಕಾಗೆಯನ್ನು ಎತ್ತಿಕೊಂಡು ಭೂಮಿಗೆ ತಂದಿಳಿಸಿತು. ಕರ್ಣಾ, ನಿನ್ನದು ಹಾಗೆಯೇ ಕಾಗೆಯ ಪೌರುಷ ಎಂದು ಶಲ್ಯನು ಕರ್ಣನನ್ನು ಮೂದಲಿಸಿದನು.

ಅರ್ಥ:
ಜಲಧಿ: ಸಮುದ್ರ; ಗಹನ: ಸುಲಭವಲ್ಲದುದು; ಅಳವಿ:ಶಕ್ತಿ; ಒದಗು:ಲಭ್ಯ, ದೊರೆತುದು; ವಾಯಸ:ಕಾಗೆ; ಕಳಿ: ಸೊಕ್ಕು; ನುಡಿ: ವಚನ, ಮಾತು, ಹೇಳು; ಹಾರು: ಲಂಘಿಸು; ಹಂಸ:ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ಕೂಡೆ: ಜೊತೆ; ಗಗನ: ಆಕಾಶ; ಬಳಿಕ: ನಂತರ; ತಲೆಕೆಳಗೆ: ಉಲ್ಟ, ಬೀಳು; ಸಾಗರ: ಸಮುದ್ರ; ಇಳೆ: ಭೂಮಿ; ಪರಿ: ರೀತಿ; ಪೌರುಷ: ಪರಾಕ್ರಮ;

ಪದವಿಂಗಡಣೆ:
ಜಲಧಿ +ಗಹನವೆ +ನಿನ್ನೊಡನೆ +ಹೊಕ್ಕ್
ಅಳವಿಗ್+ಒದಗುವೆನೆಂದು +ವಾಯಸ
ಕಳಿ+ನುಡಿದು +ಹಾರಿತ್ತು +ಹಂಸೆಯ +ಕೂಡೆ +ಗಗನದಲಿ
ಬಳಿಕ+ ತಲೆಕೆಳಗಾಗಿ +ಸಾಗರ
ದೊಳಗೆ +ಬಿದ್ದುದು +ಹಂಸೆ +ತಂದ್+ಇಳೆ
ಗಿಳುಹಿತ್+ಆ +ಪರಿ +ಕಾಕ+ಪೌರುಷ +ಕರ್ಣ +ನೀನೆಂದ

ಅಚ್ಚರಿ:
(೧) ವಾಯಸ, ಕಾಕ; ಜಲಧಿ, ಸಾಗರ – ಸಮನಾರ್ಥಕ ಪದಗಳು
(೨) ಕಥೆಯ ಮೂಲಕ ಕರ್ಣನ ಪೌರುಷವನ್ನು ಕಾಗೆಗೆ ಹೋಲಿಸುವ ಪರಿ