ಪದ್ಯ ೨೩: ಕಾಡು ಏಕೆ ಸುಗಂಧಮಯವಾಗಿತ್ತು?

ತಾರಕೆಗಳುಳಿದಂಬರದ ವಿ
ಸ್ತಾರವೋ ಗತಹಂಸಕುಲ ಕಾ
ಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ
ನಾರಿಯದ ದಳ ನೂಕಿದರೆ ತನು
ಸೌರಭದ ದಳ ತೆಗೆಯದಾ ಕಾಂ
ತಾರದೊಳಗೇನೆಂಬೆನಾ ಸೌಗಂಧ ಬಂಧುರವ (ಅರಣ್ಯ ಪರ್ವ, ೧೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆ ತರುಣಿಯರು ಕಾಡನ್ನು ತೊರೆದು ದುರ್ಯೋಧನನ ಜಲಕ್ರೀಡೆಗೆ ತೆರಳಲು, ತಾರೆಗಳು ಹೋದ ಆಗಸವೋ, ಹಂಸಗಳಿಲ್ಲದ ಸರೋವರವೋ ಎಂಬಂತೆ ತಪೋವನತು ನಿಸ್ಸಾರವಾಯಿತು. ಆ ಗಣಿಕೆಯರ ಗುಂಪು ಕಾಡನ್ನು ಬಿಟ್ಟುಹೋದರೂ ಅವರ ದೇಹಗಳ ಸುಗಂಧವು ಆ ಕಾಡಿನಲ್ಲಿ ಉಳಿಯಿತು.

ಅರ್ಥ:
ತಾರಕೆ: ನಕ್ಷತ್ರ; ಉಳಿದ: ಮಿಕ್ಕ; ಅಂಬರ: ಆಗಸ; ವಿಸ್ತಾರ: ಹರಹು, ಗತ: ತೆರಳು; ಹಂಸ: ಮರಾಲ; ಕಾಸಾರ: ಸರೋವರ; ನಿಸ್ಸಾರ: ಸಾರವಿಲ್ಲದುದು, ನೀರಸವಾದುದು; ನಿರ್ಮಳ: ಸ್ವಚ್ಛ; ತಪೋವನ: ತಪಸ್ಸು ಮಾಡುವ ಕಾಡು; ನಾರಿ: ಹೆಣ್ಣು; ದಳ: ಗುಂಪು; ನೂಕು: ತಳ್ಳು; ತನು: ದೇಹ; ಸೌರಭ: ಸುಗಂಧ; ತೆಗೆ: ಈಚೆಗೆ ತರು; ಕಾಂತಾರ: ಅಡವಿ, ಅರಣ್ಯ; ಸೌಗಂಧ: ಪರಿಮಳ; ಬಂಧುರ: ಸುಂದರವಾದ;

ಪದವಿಂಗಡಣೆ:
ತಾರಕೆಗಳ್+ಉಳಿದ್+ಅಂಬರದ+ ವಿ
ಸ್ತಾರವೋ +ಗತ+ಹಂಸಕುಲ +ಕಾ
ಸಾರವೋ +ನಿಸ್ಸಾರವೋ +ನಿರ್ಮಳ +ತಪೋವನವೋ
ನಾರಿಯದ +ದಳ +ನೂಕಿದರೆ +ತನು
ಸೌರಭದ+ ದಳ +ತೆಗೆಯದಾ +ಕಾಂ
ತಾರದೊಳಗ್+ಏನೆಂಬೆನ್+ಆ+ ಸೌಗಂಧ +ಬಂಧುರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಾರಕೆಗಳುಳಿದಂಬರದ ವಿಸ್ತಾರವೋ ಗತಹಂಸಕುಲ ಕಾ
ಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ