ಸಿಲುಕಿದನು ತಿವಿ ಸ್ವಾಮಿದ್ರೋಹನ
ಗಳದ ರಕುತಕೆ ಬಾಯನೊಡ್ಡೆನು
ತಳವಿಯಲಿ ಹೊಕ್ಕೊಕ್ಕಲಿಕ್ಕಿದನಾನೆ ಕುದುರೆಗಳ
ಎಲೆ ದುರಾತ್ಮ ದ್ಯೂತಕೇಳೀ
ಕಲಹಲಂಪಟ ನಿಲ್ಲು ನಿಲ್ಲೆನು
ತೊಳಗುವರಿದಪ್ಪಳಿಸಿದನು ದುರ್ಯೋಧನನ ರಥವ (ದ್ರೋಣ ಪರ್ವ, ೨ ಸಂಧಿ, ೭೪ ಪದ್ಯ)
ತಾತ್ಪರ್ಯ:
ಸ್ವಾಮಿದ್ರೋಹಿ ಸಿಕ್ಕಿದನು. ಅವನ ಕತ್ತನ್ನು ಕಡೆದು ರಕ್ತವನ್ನು ಕುಡಿಯಲು ಬಾಯನ್ನೊಡ್ಡು ಎನ್ನುತ್ತಾ ಎದುರಿನಲ್ಲಿದ್ದ ಆನೆ, ಕುದುರೆಗಳನ್ನು ಬಡಿದುಕೊಂಡು ಎಲವೋ ದುರಾತ್ಮ, ಮೋಸದ ಜೂಜಿನ ಲಂಪಟ, ನಿಲ್ಲು ನಿಲ್ಲು ಎನ್ನುತ್ತಾ ಒಳಹೊಕ್ಕು ದುರ್ಯೋಧನನ ರಥವನ್ನಪ್ಪಳಿಸಿದನು.
ಅರ್ಥ:
ಸಿಲುಕು: ಹಿಡಿ; ತಿವಿ: ಚುಚ್ಚು; ಸ್ವಾಮಿ: ಒಡೆಯ; ದ್ರೋಹ: ಮೋಸ; ಗಳ: ಕತ್ತು; ರಕುತ: ನೆತ್ತರು; ಒಡ್ಡು: ಅರ್ಪಿಸು, ಈಡುಮಾಡು; ಅಳವಿ: ಯುದ್ಧ; ಹೊಕ್ಕು: ಸೇರು; ಒಕ್ಕಲು: ನೆಲೆನಿಲ್ಲು; ಆನೆ: ಗಜ; ಕುದುರೆ: ಅಶ್ವ; ದುರಾತ್ಮ: ದುಷ್ಟ; ದ್ಯೂತ: ಜೂಜು, ಪಗಡೆಯಾಟ; ಕೇಳಿ: ಕ್ರೀಡೆ, ವಿನೋದ; ಕಲಹ: ಯುದ್ಧ; ಲಂಪಟ: ವಿಷಯಾಸಕ್ತ, ಕಾಮುಕ; ನಿಲ್ಲು: ತಡೆ; ಅರಿ: ಕತ್ತರಿಸು; ಅಪ್ಪಳಿಸು: ತಟ್ಟು, ತಾಗು; ರಥ: ಬಂಡಿ;
ಪದವಿಂಗಡಣೆ:
ಸಿಲುಕಿದನು +ತಿವಿ +ಸ್ವಾಮಿ+ದ್ರೋಹನ
ಗಳದ +ರಕುತಕೆ +ಬಾಯನ್+ಒಡ್ಡೆನುತ್
ಅಳವಿಯಲಿ +ಹೊಕ್ಕ್+ಒಕ್ಕಲಿಕ್ಕಿದನ್+ಆನೆ +ಕುದುರೆಗಳ
ಎಲೆ +ದುರಾತ್ಮ + ದ್ಯೂತ+ಕೇಳೀ
ಕಲಹ+ಲಂಪಟ +ನಿಲ್ಲು +ನಿಲ್ಲೆನುತ್
ಒಳಗುವರಿದ್+ಅಪ್ಪಳಿಸಿದನು +ದುರ್ಯೋಧನನ +ರಥವ
ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ದುರಾತ್ಮ, ದ್ಯೂತಕೇಳೀ ಕಲಹಲಂಪಟ, ಸ್ವಾಮಿದ್ರೋಹ