ಅಸುರರಿಪು ಕೇಳಾದಿಯಲಿ ಸಂ
ಚಿಸಿದ ಕರ್ಮವು ಜೀವರನು ಬಂ
ಧಿಸಲು ತದ್ಗುಣದೋಷ ಕರ್ತೃವನೇಕೆ ತಾಗುವುದು
ಪಸರಿಸೆತಲಾ ಸ್ಮಾರ್ತಮಾರ್ಗ
ಪ್ರಸರ ಕೊಂದಡೆ ಪಾಪ ಪಾವನ
ವೆಸಗೆ ಪುಣ್ಯವೆನಿಪ್ಪ ವಿವರಕ್ಕೇನು ನೆಲೆಯೆಂದ (ಭೀಷ್ಮ ಪರ್ವ, ೩ ಸಂಧಿ, ೫೬ ಪದ್ಯ)
ತಾತ್ಪರ್ಯ:
ಕೃಷ್ಣ ಆದಿಯಲ್ಲಿ ಕರ್ಮವು ಜೀವರನ್ನು ಬಂಧಿಸಿದುದೇ ಆದರೆ, ಕರ್ಮದ ಗುಣದೋಷಗಳು ಕರ್ತೃವನ್ನು ಹೇಗೆ ತಾನೇ ಬಂಧಿಸಲು ಸಾಧ್ಯ, ಆದಿಯಲ್ಲಿ ಸಂಚಿಸಿದ ಕರ್ಮವಾದರೂ ಯಾವುದು? ಶೃತಿ ವಿಹಿತವಾದ ಸ್ಮೃತಿಯಲ್ಲಿ ವಿಧಿಸಿದ ವಿಧಾನದಂತೆ ಕೊಂದರೆ ಪಾಪ ಬರುತ್ತದೆ, ಪವಿತ್ರ ಕರ್ಮದಿಂದ ಪುಣ್ಯವು ಬರುತ್ತದೆ ಎನ್ನುವುದಕ್ಕೆ ಆಧಾರವೇನು, ಪ್ರಥಮವಾಗಿ ಸೃಷ್ಟಿಯಾದ ಜೀವರಿಗೆ ಯಾವ ಕರ್ಮವಿರಲು ಸಾಧ್ಯ?
ಅರ್ಥ:
ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಕೇಳು: ಆಲಿಸು; ಆದಿ: ಮುಂಚೆ; ಸಂಚಿಸು: ಸಂಗ್ರಹಿಸು; ಕರ್ಮ: ಕೆಲಸ, ಕಾರ್ಯದ ಫಲ; ಜೀವ: ಉಸಿರು; ಬಂಧಿಸು: ಕಟ್ಟು; ಗುಣ: ನಡತೆ; ದೋಷ: ತಪ್ಪು; ಕರ್ತೃ: ಮಾಡುವವನು; ತಾಗು: ಮುಟ್ಟು; ಪಸರಿಸು: ಹರಡು; ಸ್ಮಾರ್ತ: ಸ್ಮೃತಿಗ್ರಂಥಗಳಲ್ಲಿ ವಿಧಿ ಸಿದ ಆಚರಣೆ; ಮಾರ್ಗ: ದಾರಿ; ಪ್ರಸರ: ಹರಡುವುದು; ಕೊಂದು: ಕೊಲ್ಲು; ಪಾಪ: ಕೆಟ್ಟ ಕೆಲಸ; ಪಾವನ: ಶುದ್ಧವಾದುದು; ಎಸಗು: ಹೊರಹಾಕು; ಪುಣ್ಯ: ಒಳ್ಳೆಯ ಕೆಲಸ; ವಿವರ: ವಿಸ್ತಾರ, ಹರಹು; ನೆಲೆ: ಆಶ್ರಯ;
ಪದವಿಂಗಡಣೆ:
ಅಸುರರಿಪು +ಕೇಳ್+ಆದಿಯಲಿ +ಸಂ
ಚಿಸಿದ +ಕರ್ಮವು +ಜೀವರನು +ಬಂ
ಧಿಸಲು +ತದ್ಗುಣದೋಷ +ಕರ್ತೃವನೇಕೆ+ ತಾಗುವುದು
ಪಸರಿಸೆತಲಾ+ ಸ್ಮಾರ್ತ+ಮಾರ್ಗ
ಪ್ರಸರ+ ಕೊಂದಡೆ +ಪಾಪ +ಪಾವನ
ವೆಸಗೆ+ ಪುಣ್ಯವೆನಿಪ್ಪ+ ವಿವರಕ್ಕೇನು +ನೆಲೆಯೆಂದ
ಅಚ್ಚರಿ:
(೧) ಅರ್ಜುನನ ಪ್ರಶ್ನೆ – ಆದಿಯಲಿ ಸಂಚಿಸಿದ ಕರ್ಮವು ಜೀವರನು ಬಂಧಿಸಲು ತದ್ಗುಣದೋಷ ಕರ್ತೃವನೇಕೆ ತಾಗುವುದು